ADVERTISEMENT

ರಾಜಸ್ಥಾನ ರಾಜಕೀಯ | ಬಿಜೆಪಿಯ ಆರು ಶಾಸಕರು ಗುಜರಾತ್‌ನ ಪೋರಬಂದರ್‌ಗೆ ಸ್ಥಳಾಂತರ

ಪಿಟಿಐ
Published 8 ಆಗಸ್ಟ್ 2020, 12:31 IST
Last Updated 8 ಆಗಸ್ಟ್ 2020, 12:31 IST
ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌
ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌   

ಜೈಪುರ: ಆಗಸ್ಟ್‌ 14ರಿಂದ ರಾಜಸ್ಥಾನ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನ ಬಿಜೆಪಿ ತನ್ನ ಆರು ಶಾಸಕರನ್ನು ಗುಜರಾತ್‌ನ ಪೋರಬಂದರ್‌ಗೆ ಸ್ಥಳಾಂತರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಾಸಕರು ಜೈಪುರ ವಿಮಾನ ನಿಲ್ದಾಣದಿಂದ ಬಿಜೆಪಿ ಆಡಳಿತದ ಗುಜರಾತ್‌ಗೆ ಚಾರ್ಟರ್ಡ್‌ವಿಮಾನದಲ್ಲಿ ತೆರಳಿದ್ದಾರೆ.ಶಾಸಕರು ಐಷಾರಾಮಿ ರೆಸಾರ್ಟ್‌ನಲ್ಲಿ ತಂಗಲಿದ್ದು, ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇಶುಕ್ರವಾರ ಬಿಜೆಪಿಯ 12 ಶಾಸಕರು ರಾಜಸ್ಥಾನದಿಂದ ಗುಜರಾತ್‌ನ ಅಹಮದಾಬಾದ್‌ಗೆ ತೆರಳಿದ್ದು, ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ADVERTISEMENT

ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಹಾಗೂ18 ಶಾಸಕರ ಬಳಗ ಬಂಡಾಯ ಸಾರಿದ್ದರು. ಬಳಿಕ ರಾಜ್ಯದಲ್ಲಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ಶೀಘ್ರದಲ್ಲೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಇದರಲ್ಲಿ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್‌ ಪೂನಿಯಾ ಹೇಳಿದ್ದಾರೆ.

‘ಕೆಲವು ಬಿಜೆಪಿ ಶಾಸಕರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದರು. ಕಿರುಕುಳಕ್ಕೊಳಗಾದ ಶಾಸಕರು ಸ್ವಯಂಪ್ರೇರಣೆಯಿಂದ ತೀರ್ಥಯಾತ್ರೆಗೆ ಹೋಗಿದ್ದಾರೆ’ ಎಂದು ವಿಮಾನ ನಿಲ್ದಾಣದಿಂದ ಹೊರಬಂದ ನಂತರ ಶಾಸಕ ಅಶೋಕ್‌ ಲಾಹೋತಿ ಪ್ರತಿಕ್ರಿಯಿಸಿದ್ದಾರೆ.

ಜೈಪುರ ವಿಮಾನ ನಿಲ್ದಾಣದಿಂದ ಶನಿವಾರ ಬಿಜೆಪಿ ಶಾಸಕರಾದ ನಿರ್ಮಲ್‌ ಕುಮಾವತ್‌, ಗೋಪಿಚಂದ್‌ ಮೀನಾ, ಜಬ್ಬರ್‌ ಸಿಂಗ್‌ ಸಂಖ್ಲಾ, ಧರ್ಮವೀರ್‌ ಮೋಚಿ, ಗೋಪಾಲ್‌ ಲಾಲ್‌ ಶರ್ಮಾ ಸೇರಿದಂತೆ ಗುರುದೀಪ್‌ ಸಿಂಗ್‌ ಶಾಹಪಿನಿ ಪೋರಬಂದರ್‌ಗೆ ತೆರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.