ADVERTISEMENT

ರಾಷ್ಟ್ರ ರಾಜಕಾರಣದ ಮುಂದಿನ ನಡೆ ನಿರ್ಧರಿಸಲಿದೆ ಫಲಿತಾಂಶ: ಸಂಜಯ್‌ ರಾವುತ್

ಶಿವಸೇನಾ ಮುಖ್ಯಸ್ಥ ಸಂಜಯ್‌ ರಾವುತ್ ವಿಶ್ಲೇಷಣೆ

ಪಿಟಿಐ
Published 1 ಏಪ್ರಿಲ್ 2021, 9:34 IST
Last Updated 1 ಏಪ್ರಿಲ್ 2021, 9:34 IST
 ಸಂಜಯ್‌ ರಾವುತ್
ಸಂಜಯ್‌ ರಾವುತ್    

ಮುಂಬೈ: ಪ್ರಸ್ತುತ ನಡೆಯುತ್ತಿರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶವು ರಾಷ್ಟ್ರ ರಾಜಕಾರಣದ ಮುಂದಿನ ರಾಜಕೀಯ ಹಾದಿಯನ್ನು ನಿರ್ಧರಿಸಲಿದೆ ಎಂದು ಶಿವಸೇನಾ ವಕ್ತಾರ ಸಂಜಯ್ ರಾವುತ್‌ ಅಭಿಪ್ರಾಯಪಟ್ಟರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ನಾಲ್ಕು ರಾಜ್ಯಗಳಲ್ಲಿ, ವಿಶೇಷವಾಗಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳ ಫಲಿತಾಂಶ, ಮುಂದಿನ ರಾಷ್ಟ್ರ ರಾಜಕಾರಣದ ನಡೆಯನ್ನು ನಿರ್ಧರಿಸಲಿವೆ‘ ಎಂದರು.

‘ಅಸ್ಸಾಂನಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಆದರೆ ಕಾಂಗ್ರೆಸ್ ಪಕ್ಷ ಗೆಲ್ಲುವುದಕ್ಕಾಗಿ ಕಠಿಣ ಹೋರಾಟ ನಡೆಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಲು ಬಿಜೆಪಿ ಶತಾಯಗತಾಯ ಪ್ರಯತ್ನಿಸುತ್ತಿದೆ. ಆದರೆ, ಮಮತಾ ಅವರು ಹೆಣ್ಣು ಹುಲಿಯಂತೆಯೇ ಹೋರಾಡುತ್ತಿದ್ದು, ಅವರು ಗೆಲ್ಲುವುದು ನಿಶ್ಚಿತ. ‌ಕೇರಳ ಮತ್ತು ತಮಿಳುನಾಡು ರಾಜ್ಯಗಳ ಮತದಾರರ ಮನಸ್ಥಿತಿಯನ್ನು ಸಹ ನಾವು ಊಹಿಸಬಹುದಾಗಿದೆ’ ಎಂದು ಹೇಳಿದರು.

ADVERTISEMENT

ಈ ನಡುವೆ ಗುರುವಾರ ಮಮತಾ ಬ್ಯಾನರ್ಜಿ ಅವರು ‘ಬಿಜೆಪಿ ವಿರುದ್ಧ ಹೋರಾಡಲು ಇದು ಸಕಾಲ. ಎಲ್ಲರೂ ಕೈ ಜೋಡಿಸಿ‘ ಎಂದು ಬಿಜೆಪಿಯೇತರ ಪಕ್ಷಗಳ ಮುಖಂಡರಿಗೆಬರೆದ ಪತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವುತ್, ‘ಈ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶಗಳು ರಾಷ್ಟ್ರ ರಾಜಕಾರಣದ ಮುಂದಿನ ಹಾದಿಯನ್ನು ನಿರ್ಧರಿಸುತ್ತವೆ. ಈ ಚುನಾವಣೆಯ ನಂತರ ಒಂದು ಸ್ಪಷ್ಟ ಚಿತ್ರಣ ಸಿಗಲಿದ್ದು, ಆಗ ಮೈತ್ರಿಗಳ ಸ್ವರೂಪ ಕುರಿತು ಚರ್ಚಿಸಲಾಗುವುದು‘ ಎಂದು ಹೇಳಿದರು. ಮಮತಾ ಬ್ಯಾನರ್ಜಿ ಬರೆದಿರುವ ಪತ್ರ ಶಿವಸೇನಾ ಮುಖ್ಯಸ್ಥ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೂ ತಲುಪಿದೆ ಎಂದರು.

‘ಪಶ್ಚಿಮಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆ ‘ಮಹಾಭಾರತ‘ಕ್ಕಿಂತಲೂ ತೀಕ್ಷ್ಣವಾಗಿದೆ ಎಂದು ಬಣ್ಣಿಸಿದ ರಾವುತ್, ‘ಇಡೀ ದೇಶವೇ ಆ ರಾಜ್ಯದ ಚುನಾವಣೆಯವನ್ನು ಗಮನಿಸುತ್ತಿದೆ. ಹಾಗೆಯೇ ಆ ರಾಜ್ಯದ ಮತದಾರರು ಬಹಳ ಬುದ್ದಿವಂತರಿದ್ದಾರೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.