ಮೌಲಾನಾ ಇಕ್ಬಾಲ್
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಪಾಕಿಸ್ತಾನ ನಡೆಸಿದ ಭಾರಿ ಶೆಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಮೌಲಾನಾ ಇಕ್ಬಾಲ್ ಭಯೋತ್ಪಾದಕರಲ್ಲ, ಅವರು ಧಾರ್ಮಿಕ ವ್ಯಕ್ತಿ ಎಂದು ಪೊಲೀಸರು ಗುರುವಾರ ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಮೌಲಾನಾ ಇಕ್ಬಾಲ್ ಹಾಗೂ ಇತರ 12 ಜನರು ಮೃತಪಟ್ಟಿದ್ದರು.
‘45 ವರ್ಷದ ಇಕ್ಬಾಲ್ ಓರ್ವ ಭಯೋತ್ಪಾದಕ ಮತ್ತು ಗಡಿಯಾಚೆಗೆ ಭಾರತೀಯ ಸಶಸ್ತ್ರ ಪಡೆಗಳ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದಾರೆ’ ಎಂದು ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಇವುಗಳು ಆಧಾರರಹಿತ ಮತ್ತು ದಾರಿತಪ್ಪಿಸುವ ವರದಿ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಪಷ್ಟೀಕರಣವನ್ನು ನೀಡಿದ್ದಾರೆ.
‘ಯಾವುದೇ ಮಾಧ್ಯಮ ಸಂಸ್ಥೆ, ಪತ್ರಕರ್ತ ನಕಲಿ ಸುದ್ದಿಗಳ ಪ್ರಸಾರದಲ್ಲಿ ತೊಡಗಿರುವುದು ಕಂಡುಬಂದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬುಧವಾರ ಪೂಂಚ್ ನಗರದ ತಮ್ಮ ಮದರಸಾ ಜಿಯಾ-ಉಲ್-ಉಲೂಮ್ ಮೇಲೆ ಪಾಕಿಸ್ತಾನಿ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ಮಂಡಿ ತಹಸಿಲ್ನ ಬೈಲಾ ಗ್ರಾಮದ ನಿವಾಸಿ ಇಕ್ಬಾಲ್ ಸಾವಿಗೀಡಾಗಿದ್ದರು. ಪಾಕಿಸ್ತಾನದ ಶೆಲ್ ದಾಳಿಯಿಂದ ಜಿಲ್ಲೆಯಲ್ಲಿ ಗುರುದ್ವಾರ ಮತ್ತು ದೇವಾಲಯವೂ ಹಾನಿಗೊಳಗಾಗಿದ್ದು, ಒಬ್ಬ ಸೈನಿಕ, ನಾಲ್ವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ.
‘ಪೂಂಚ್ ಪೊಲೀಸರು ಇಂತಹ ಸುಳ್ಳು ವರದಿಗಗಳನ್ನು ಬಲವಾಗಿ ನಿರಾಕರಿಸುತ್ತಾರೆ. ಮೃತ (ಇಕ್ಬಾಲ್) ಸ್ಥಳೀಯ ಸಮುದಾಯದಲ್ಲಿ ಗೌರವಾನ್ವಿತ ಧಾರ್ಮಿಕ ವ್ಯಕ್ತಿಯಾಗಿದ್ದರು. ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧವನ್ನು ಹೊಂದಿರಲಿಲ್ಲ. ಇಂತಹ ಸೂಕ್ಷ್ಮ ಘಟನೆಗಳನ್ನು ತಪ್ಪಾಗಿ ವರದಿ ಮಾಡುವುದು ಅನಗತ್ಯ ಭೀತಿಯನ್ನು ಉಂಟುಮಾಡುವುದಲ್ಲದೆ, ಮೃತರ ಘನತೆ ಮತ್ತು ದುಃಖಿತ ಕುಟುಂಬದ ಭಾವನೆಗಳನ್ನು ಅಗೌರವಿಸುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.
ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪ್ರಕಟಿಸುವ ಮೊದಲು ಎಲ್ಲ ಮಾಧ್ಯಮ ಸಿಬ್ಬಂದಿ ಮತ್ತು ವೇದಿಕೆಗಳು ಅಧಿಕೃತ ಮೂಲಗಳಿಂದ ಸತ್ಯಗಳನ್ನು ಪರಿಶೀಲಿಸಬೇಕೆಂದು ಅದು ಸಲಹೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.