ADVERTISEMENT

ಗೋವಾ | ಚುನಾವಣೆಗೂ ಮುನ್ನ ಟಿಎಂಸಿ ಜೊತೆ ಮೈತ್ರಿ ಇಲ್ಲ: ಕೇಜ್ರಿವಾಲ್‌

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 11:27 IST
Last Updated 16 ಜನವರಿ 2022, 11:27 IST
ಗೋವಾದಲ್ಲಿ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ – ಚಿತ್ರ: ಎಎಪಿ ಗೋವಾ ಟ್ವಿಟರ್‌ ಖಾತೆಯಲ್ಲಿ ಪ್ರಕಟಿತ ಚಿತ್ರ
ಗೋವಾದಲ್ಲಿ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ – ಚಿತ್ರ: ಎಎಪಿ ಗೋವಾ ಟ್ವಿಟರ್‌ ಖಾತೆಯಲ್ಲಿ ಪ್ರಕಟಿತ ಚಿತ್ರ   

ಪಣಜಿ: ಮುಂಬರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು (ಎಎಪಿ) ಬಹುಮತ ಪಡೆಯಲು ಸಾಧ್ಯವಾಗದಿದ್ದರೆ, ಚುನಾವಣೆಯ ನಂತರದಲ್ಲಿ ಬಿಜೆಪಿಯೇತರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ನಿರ್ಧರಿಸುವುದಾಗಿ ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಹೇಳಿದರು.

ಭಾನುವಾರ ಪಣಜಿಯಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮುಂಚೆ ತೃಣಮೂಲ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರವನ್ನು ತಳ್ಳಿ ಹಾಕಿದರು. ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್‌ ಪರ್‍ರೀಕರ್ ಅವರ ಮಗ ಉತ್ಪಾಲ್‌ ಅವರಿಗೂ ಪಕ್ಷದ ಬಾಗಿಲು ತೆರೆದಿರುವುದಾಗಿ ಹೇಳಿದರು.

ಪಣಜಿಯಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್‌ ಕೋರಿದ್ದ ಉತ್ಪಾಲ್‌ ಅವರ ಮನವಿಯನ್ನು ಪಕ್ಷ ತಿರಸ್ಕರಿಸುವುದಾಗಿ ಇತ್ತೀಚೆಗೆ ವರದಿಯಾಗಿತ್ತು.

ADVERTISEMENT

'ಗೋವಾ ಮತದಾರರು ನೀಡುವ ಆದೇಶದಲ್ಲಿ ಅಕಸ್ಮಾತ್‌ ಚುನಾವಣೋತ್ತರ ಮೈತ್ರಿ ಅನಿವಾರ್ಯವಾದರೆ, ಬಿಜೆಪಿಯೇತರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಯೋಚಿಸಬಹುದು. ಅಂಥ ಸ್ಥಿತಿ ಎದುರಾಗುವುದಿಲ್ಲ ಎಂದು ನನಗೆ ಭರವಸೆ ಇದೆ' ಎಂದು ಹೇಳಿದರು.

ಎಎಪಿ ಪಂಜಾಬ್‌ನಲ್ಲೂ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ಕೇಜ್ರಿವಾಲ್‌ ಹೇಳಿದರು. ಫೆಬ್ರುವರಿ 14ರಂದು ಗೋವಾ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ.

ಪ್ರತಿ ಕುಟಂಬಕ್ಕೆ ₹10 ಲಕ್ಷದ ಪ್ರಯೋಜನ

ಗೋವಾದಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ, ರಾಜ್ಯ ಸರ್ಕಾರದ ಯೋಜನೆಗಳ ಮೂಲಕ ಪ್ರತಿ ಕುಟುಂಬ ಐದು ವರ್ಷಗಳಲ್ಲಿ ₹10 ಲಕ್ಷ ಪ್ರಯೋಜನ ಪಡೆಯಲಿದೆ ಎಂದು ಕೇಜ್ರಿವಾಲ್‌ ಹೇಳಿದರು.

'ಉಚಿತ ವಿದ್ಯುತ್‌, ನೀರಿನ ಬಿಲ್‌ ಮೇಲೆ ಸಬ್ಸಿಡಿ, ನಿರುದ್ಯೋಗಿಗಳಿಗೆ ಭತ್ಯೆ, ಮಹಿಳೆಯರಿಗೆ ಭತ್ಯೆ, ಉಚಿತ ಆರೋಗ್ಯ ಚಿಕಿತ್ಸೆ, ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ. ಈ ಎಲ್ಲದಕ್ಕಾಗಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ₹2 ಲಕ್ಷ ವೆಚ್ಚ ತಗುಲುತ್ತದೆ. ಐದು ವರ್ಷಗಳಲ್ಲಿ ₹10 ಲಕ್ಷ ವೆಚ್ಚ ಆಗುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.