ADVERTISEMENT

'83 ವರ್ಷದ ಯೋಧನ ಏಕಾಂಗಿ ಹೋರಾಟ' ಎಂದು ಶರ‌ದ್ ಪವಾರ್ ಬೆನ್ನಿಗೆ ನಿಂತ ಕಾರ್ಯಕರ್ತರು

ಮುಂಬೈನಲ್ಲಿ ಎರಡು ಬಣಗಳ ಕಾರ್ಯಕರ್ತರ ಶಕ್ತಿ ಪ್ರದರ್ಶನ

ಪಿಟಿಐ
Published 5 ಜುಲೈ 2023, 10:43 IST
Last Updated 5 ಜುಲೈ 2023, 10:43 IST
ಅಜಿತ್ ಪವಾರ್, ಶರದ್ ಪವಾರ್
ಅಜಿತ್ ಪವಾರ್, ಶರದ್ ಪವಾರ್   

ಮುಂಬೈ: ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿ ಆದ ನಂತರ ಎನ್‌ಸಿಪಿ ನಾಯಕ ಶರದ್ ಪವಾರ್ ಹಾಗೂ ಅಜಿತ್ ಬಣಗಳ ಶಕ್ತಿ ಪ್ರದರ್ಶನ ಭಾರಿ ಜೋರಾಗಿ ನಡೆಯುತ್ತಿದೆ.

ಬುಧವಾರ ಶರದ್ ಪವಾರ್ ಮನೆ ಸನಿಹದ ಭುಜಬಲ್ ನಾಲೆಡ್ಜ್ ಸಿಟಿ ಹಾಲ್‌ನಲ್ಲಿ ಅಜಿತ್ ಪವಾರ್ ಬೆಂಬಲಿಗರು ಸಭೆ ನಡೆಸಿದರು. ಈ ವೇಳೆ ಅಜಿತ್ ಪವಾರ್ ಅವರು, ನನಗೆ 40 ಎನ್‌ಸಿಪಿ ಶಾಸಕರ ಬೆಂಬಲ (ಒಟ್ಟು 53 ಶಾಸಕರಲ್ಲಿ) ಇದೆ ಎಂದು ಹೇಳಿಕೊಂಡರು.

ಇದೇ ಸಭಾಂಗಣದ ಮುಂದೆ ಭಾರಿ ಸಂಖ್ಯೆಯಲ್ಲಿ ಜಮಾವಣೆ ಆಗಿದ್ದ ಭಾರಾಮತಿಯಿಂದ ಬಂದಿದ್ದ ಬೆಂಬಲಿಗರು ‘ದಾದಾನ (ಅಜಿತ್ ಪವಾರ್‌) ಕಟ್ಟಾ ಬೆಂಬಲಿಗರು ನಾವು’ ಎಂದು ಘೋಷಣೆ ಕೂಗಿದ್ದಾರೆ.

ADVERTISEMENT

ಇನ್ನೊಂದೆಡೆ ದಕ್ಷಿಣ ಮುಂಬೈನ ಸಿಲ್ವರ್ ಓಕ್ ಬಳಿ ಇರುವ ಶರದ್ ಪವಾರ್ ಅವರ ಮನೆ ಹಾಗೂ ಎನ್‌ಸಿಪಿ ಕೇಂದ್ರ ಕಚೇರಿ ಯಶವಂತರಾವ್ ಚೌಹಾಣ್ ಸಭಾಂಗಣದ ಮುಂದೆ ನೆರದಿರುವ ಶರದ್ ಅವರ ಅಪಾರ ಅಭಿಮಾನಿಗಳು ‘83 ವರ್ಷದ ಯೋಧನ ಏಕಾಂಗಿ ಹೋರಾಟ’ ಎಂದು ಎನ್‌ಸಿಪಿ ನಾಯಕನನ್ನು ಸೈನಿಕನಿಗೆ ಹೋಲಿದ್ದಾರೆ.

ಭಾನುವಾರ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಅಜಿತ್ ಪವಾರ್ ಅವರು ಸಿಎಂ ಏಕನಾಥ್ ಶಿಂದೆ ಅವರಿಗೆ ಬೆಂಬಲ ನೀಡಿ ಡಿಸಿಎಂ ಆಗಿದ್ದಾರೆ. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಈ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿವೆ.

ಶರದ್ ಪವಾರ್ ಅವರು, ಅಜಿತ್‌ಗೆ ಎನ್‌ಸಿಪಿ ಕಾರ್ಯಕರ್ತರ, ಶಾಸಕರ ಬೆಂಬಲ ಇಲ್ಲ. ನಾನೊಬ್ಬನೇ ಹೋರಾಡಿ ಮತ್ತೆ ಪಕ್ಷ ಕಟ್ಟುತ್ತೇನೆ ಎಂದು ಗುಡುಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.