ಲಖನೌ: ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ನಾಲ್ಕು ಗಂಟೆಗಳ ಒಳಗೆ ಪೂರ್ಣಗೊಳಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ದುಃಖಿತ ಕುಟುಂಬಗಳು ಮರಣೋತ್ತರ ಪರೀಕ್ಷೆಗಾಗಿ ಕಾಯುವಿಕೆಯ ನೋವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಯನ್ನು ರಾಜ್ಯದ ಎಲ್ಲಾ ಮರಣೋತ್ತರ ಪರೀಕ್ಷೆ ಕೇಂದ್ರಗಳಲ್ಲಿ ಜಾರಿಗೆ ತರಲಾಗವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಮಾರ್ಗಸೂಚಿಯ ಪ್ರಕಾರ ಮೃತದೇಹವು ಆಸ್ಪತ್ರೆಗೆ ಬಂದ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಮರಣೋತ್ತರ ಪರೀಕ್ಷೆ ವಿಳಂಬವಾಗದಂತೆ ಕಾಲಮಿತಿಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿಗಳಿಗೆ ವೈದ್ಯರ ಬಹು ತಂಡಗಳನ್ನು ರಚಿಸುವಂತೆ ಸೂಚಿಸಲಾಗಿದೆ.
ಸೂರ್ಯಾಸ್ತದ ನಂತರ ಮರಣೋತ್ತರ ಪರೀಕ್ಷೆಗಳನ್ನು ಸಾಮಾನ್ಯವಾಗಿ ಮಾಡುವುದಿಲ್ಲ. ವಿಶೇಷವಾಗಿ ಕೊಲೆ, ಆತ್ಮಹತ್ಯೆ, ಲೈಂಗಿಕ ಅಪರಾಧಗಳು, ವಿರೂಪಗೊಂಡ ದೇಹಗಳು ಮತ್ತು ಅನುಮಾನಾಸ್ಪದ ಸಂದರ್ಭಗಳಲ್ಲಿ ಸಾವುಗಳು ಸಂಭವಿಸಿದಾಗ ಮರಣೋತ್ತರ ಪರೀಕ್ಷೆಗಳನ್ನು ಮಾಡುವುದಿಲ್ಲ. ಆದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಅಧಿಕೃತ ಅಧಿಕಾರಿಯಿಂದ ಲಿಖಿತ ಅನುಮೋದನೆಯೊಂದಿಗೆ ವಿನಾಯಿತಿ ನೀಡಬಹುದು.
ಕಸ್ಟಡಿ ಸಾವು, ಪೊಲೀಸ್ ಎನ್ಕೌಂಟರ್ ಅಥವಾ ಮದುವೆಯಾದ 10 ವರ್ಷಗಳೊಳಗಿನ ಮಹಿಳೆಯರ ಸಾವುಗಳಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಮೃತ ಕುಟುಂಬದಿಂದ ವಿಡಿಯೊಗ್ರಫಿಗೆ ಯಾವುದೇ ವೆಚ್ಚವನ್ನು ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮಹಿಳೆಯರ ಮೇಲಿನ ಅಪರಾಧಗಳು, ಅತ್ಯಾಚಾರ ಅಥವಾ ಮದುವೆಯಾದ 10 ವರ್ಷಗಳೊಳಗೆ ಮಹಿಳೆಯ ಸಾವು ಸೇರಿದಂತೆ ಇತರೆ ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆಯಲ್ಲಿ ಕನಿಷ್ಠ ಒಬ್ಬ ಮಹಿಳಾ ವೈದ್ಯರನ್ನು ಸೇರಿಸುವುದು ಕಡ್ಡಾಯವಾಗಿದೆ. ಗುರುತಿಸಲಾಗದ ಮೃತದೇಹಗಳ ಗುರುತಿಸುವಿಕೆಗೆ ಸಹಾಯ ಮಾಡಲು ಡಿಎನ್ಎ ಮಾದರಿ ವಿಶ್ಲೇಷಣೆ ನಡೆಸಬೇಕು ಎಂದು ಸರ್ಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.