ಚಂಪಾರಣ್ಯ(ಬಿಹಾರ): ‘ಬಿಹಾರದ ಜನ ಲಾಲು, ನಿತೀಶ್ ಮತ್ತು ಪ್ರಧಾನಿ ನರೇಂದ್ರ ಮೋದಿಯಿಂದ ಮುಕ್ತರಾಗಲು ಬಯಸುತ್ತಾರೆ’ ಎಂದು ಜನ ಸೂರಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಪೂರ್ವ ಚಂಪಾರಣ್ಯದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಹಾರವನ್ನು ಹಿಂದೆ ಆಳಿದವರು ಮತ್ತು ಈಗ ಆಳುತ್ತಿರುವವರು ಅಭಿವೃದ್ಧಿ ಮಾಡಲು ಸಂಪೂರ್ಣ ವಿಫಲರಾಗಿದ್ದಾರೆ ಎಂದಿದ್ದಾರೆ.
‘ಈ ನೆಲದಿಂದಲೇ ನಮ್ಮ ಪಕ್ಷದ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದೇವೆ. ಇದೇ ಹಾದಿಯಲ್ಲಿ ನಾನು ನಡೆದಿದ್ದೇನೆ. ಈ ರಸ್ತೆಯಲ್ಲಿ ಮೊಣಕಾಲು ಆಳದಷ್ಟು ಮರಳು ಇರುತ್ತಿತ್ತು. ಆಗ ಅದರ ಬಗ್ಗೆ ನಾನು ದನಿ ಎತ್ತಿದೆ. ಇಂದು ನಾನು ಜನರ ಗುಂಪನ್ನು ನೋಡುತ್ತಿದ್ದೇನೆ. ಅವರೆಲ್ಲರೂ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಲಾಲು, ನಿತೀಶ್ ಮತ್ತು ಪ್ರಧಾನಿ ಮೋದಿಯಿಂದ ಮುಕ್ತರಾಗಲು ಅವರು ಬಯಸುತ್ತಾರೆ’ ಎಂದು ಹೇಳಿದ್ದಾರೆ.
ರಾಜಕೀಯ ಹಿನ್ನೆಲೆ ಹೊಂದಿರುವವರನ್ನು, ಬಲಾಢ್ಯರನ್ನು ನಮ್ಮ ಪಕ್ಷದಿಂದ ಕಣಕ್ಕಿಳಿಸುವುದಿಲ್ಲ. ಅಭ್ಯರ್ಥಿಗಳು ಸಾಮಾನ್ಯ ಹಿನ್ನೆಲೆಯಿಂದ ಬಂದವರಾಗಿರಬೇಕು ಎಂದು ಪುನರುಚ್ಛರಿಸಿದ್ದಾರೆ.
ಇದೇ ವೇಳೆ ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದಿಲೀಪ್ ಅವರ ವಿರುದ್ಧ ಘೋರ ಅಪರಾಧಗಳನ್ನು ಎಸಗಿದ್ದಾರೆ ಎಂಬ ಆರೋಪಗಳಿವೆ. ಆದರೆ, ಅದಕ್ಕೆ ಅವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಅಧಿಕಾರಕ್ಕೆ ಬಂದರೆ ಬಿಜೆಪಿ ಮತ್ತು ಅದರ ಅಧ್ಯಕ್ಷರ ಅಪರಾಧಗಳನ್ನು ಬಯಲು ಮಾಡುತ್ತೇವೆ’ ಎಂದು ಹೇಳಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ನಡೆಯುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.