ಚಂಡೀಗಡ: ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶನಿವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿನ 'ಬಿಕ್ಕಟ್ಟನ್ನು ತಪ್ಪಾಗಿ ನಿರ್ವಹಿಸುವುದನ್ನು ಮುಚ್ಚಿಹಾಕುವ' ಪ್ರಯತ್ನದಲ್ಲಿ ಪಕ್ಷದ ಮುಖಂಡರು 'ಅಸಂಬದ್ಧ ಸುಳ್ಳುಗಳನ್ನು' ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಪಂಜಾಬ್ ಮುಖ್ಯಮಂತ್ರಿ ಬದಲಾವಣೆಯನ್ನು ಸೋನಿಯಾ ಗಾಂಧಿ ಅವರು ಮಾಡಲಿಲ್ಲ, ಬದಲಿಗೆ ಪಕ್ಷದ 78 ಶಾಸಕರು ಮಾಡಿದರು ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಅಮರಿಂದರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಮತ್ತು ಪಂಜಾಬ್ ವ್ಯವಹಾರಗಳ ಉಸ್ತುವಾರಿ ಸುರ್ಜೆವಾಲಾ ಅವರು ಹಂಚಿಕೊಂಡ 'ವಿರೋಧ' ವ್ಯಕ್ತಪಡಿಸಿದ ಶಾಸಕರ ಸಂಖ್ಯೆಯು ತಮ್ಮ ವಿರುದ್ಧದ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತದೆ. ಇದೊಂತರ 'ಹಾಸ್ಯಾಸ್ಪದ' ಎಂದು ಹೇಳಿದರು.
43 ಶಾಸಕರು ಹೈಕಮಾಂಡ್ಗೆ ಪತ್ರ ಬರೆದಿದ್ದರು ಎಂದು ರಾವತ್ ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.
'ಇಡೀ ಪಕ್ಷವು ನವಜೋತ್ ಸಿಂಗ್ ಸಿಧು ಅವರ ಹಾಸ್ಯ ನಾಯಕೀಯ ಪ್ರಜ್ಞೆಯಿಂದ ತುಂಬಿಕೊಂಡಿದೆ. ಇನ್ಮುಂದೆ ಅವರು ನನ್ನ ವಿರುದ್ಧ 117 ಶಾಸಕರು ಇದ್ದರು ಎಂದು ಹೇಳುತ್ತಾರೆ. ಇದು ಪಕ್ಷದಲ್ಲಿನ ಸ್ಥಿತಿ. ಅವರು ಸುಳ್ಳನ್ನು ಕೂಡ ಸರಿಯಾಗಿ ಹೇಳಲು ಸಾಧ್ಯವಿಲ್ಲ' ಎಂದು ಸಿಂಗ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ 'ಸಂಪೂರ್ಣ ಅಸ್ತವ್ಯಸ್ತ ಸ್ಥಿತಿಯಲ್ಲಿದೆ' ಮತ್ತು ಹಿರಿಯ ನಾಯಕರು ಪಕ್ಷದ ಕಾರ್ಯವೈಖರಿಯೊಂದಿಗೆ ಸಂಪೂರ್ಣವಾಗಿ ಅಸಮಾಧಾನ ಹೊಂದಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದೆ. ಪತ್ರಕ್ಕೆ ಸಹಿ ಹಾಕಿದ 43 ಶಾಸಕರ ಮೇಲೆ ಒತ್ತಡ ಹೇರಲಾಗಿತ್ತು' ಎಂದು ತಿಳಿಸಿದ್ದಾರೆ.
ಪಂಜಾಬ್ ಬಿಕ್ಕಟ್ಟಿನ 'ದುರಾಡಳಿತ'ದಿಂದಾಗಿ ಪಕ್ಷವನ್ನು ಮೂಲೆಗೆ ತಳ್ಳಲ್ಪಟ್ಟಿದ್ದರೂ ಕೂಡ, ಕಾಂಗ್ರೆಸ್ ಈಗ ಸಂಪೂರ್ಣ ಭೀತಿಯ ಸ್ಥಿತಿಯಲ್ಲಿದೆ. ಇದು ಅದರ ನಾಯಕರ ಹೇಳಿಕೆಗಳಲ್ಲಿ ಸ್ಪಷ್ಟವಾಗಿದೆ. ಆಂತರಿಕ ಗೊಂದಲದಿಂದ ಕಂಗೆಟ್ಟಿರುವ ಪಕ್ಷವು ತನ್ನ ವೈಫಲ್ಯಗಳನ್ನು ಮುಚ್ಚಿಡಲು ಆರೋಪ ಮಾಡುವಲ್ಲಿ ನಿರತವಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.