ನವದೆಹಲಿ: ‘ಭಾರತದ ಸುಪ್ರೀಂ ಕೋರ್ಟ್, ಪ್ರಗತಿಪರ ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.
‘ಅಂತರರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ–2020’ರಲ್ಲಿ ‘ನ್ಯಾಯಾಂಗ ಮತ್ತು ಬದಲಾಗುತ್ತಿರುವ ಜಗತ್ತು’ ವಿಷಯವಾಗಿ ಮಾತನಾಡಿದ ಅವರು, ‘ಲಿಂಗನ್ಯಾಯ ಪಾಲಿಸುವ ಗುರಿ ಸಾಧಿಸುವ ನಿಟ್ಟಿನಲ್ಲಿ ಭಾರತದ ಸುಪ್ರೀಂ ಕೋರ್ಟ್ ಯಶಸ್ವಿಯಾಗಿದೆ’ ಎಂದರು.
‘ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಗಾಗಿ ದಶಕದ ಹಿಂದೆಯೇ ಮಾರ್ಗಸೂಚಿ ರಚಿಸುವುದರಿಂದ ಆರಂಭಿಸಿ, ಸೇನೆಯಲ್ಲಿ ಮಹಿಳೆಗೆ ಸಮಾನ ಸ್ಥಾನಮಾನ ನೀಡುವ ಇತ್ತೀಚಿನ ತೀರ್ಪಿನವರೆಗೆ ದೇಶದ ಸಾಮಾಜಿಕ ಪರಿವರ್ತನೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಪಾತ್ರ ವಹಿಸಿದೆ’ ಎಂದು ಅವರು ಹೇಳಿದರು.
ದೇಶದ ಭಾಷಾ ವೈವಿಧ್ಯವನ್ನು ಗಮನದಲ್ಲಿಟ್ಟು, ಒಂಬತ್ತು ಭಾಷೆಗಳಲ್ಲಿ ತೀರ್ಪುಗಳನ್ನು ಪ್ರಕಟಿಸಲು ಕ್ರಮ ಕೈಗೊಂಡಿರುವುದಕ್ಕೆ ಹಾಗೂ ಮಧ್ಯಸ್ಥಿಕೆಯ ಮೂಲಕ ವ್ಯಾಜ್ಯಗಳನ್ನು ಪರಿಹರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದರಿಂದ ನ್ಯಾಯಾಂಗದ ಮೇಲಿನ ಒತ್ತಡ ಕಡಿಮೆಯಾಗುವುದಲ್ಲದೆ ವಿವಾದಗಳಿಗೆ ಶೀಘ್ರ ಪರಿಹಾರವೂ ಲಭಿಸುತ್ತದೆ ಎಂದರು.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ಮಾತನಾಡಿ, ‘ಭಾರತದ ಸುಪ್ರೀಂ ಕೋರ್ಟ್ನ ತೀರ್ಪುಗಳು ಈಗ ಬೇರೆಬೇರೆ ದೇಶಗಳ ನ್ಯಾಯಾಲಯಗಳಲ್ಲೂ ಉಲ್ಲೇಖವಾಗುತ್ತಿವೆ. ಪರಿಣಾಮವಾಗಿ ಭಾರತವು ಭರವಸೆಯ ದಾರಿದೀಪವಾಗಿ ಗೋಚರಿಸಲು ಆರಂಭವಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.