ADVERTISEMENT

ರಾಷ್ಟ್ರಪತಿ ಹುದ್ದೆಗೆ ಸಿನ್ಹಾ–ಮುರ್ಮು ಪೈಪೋಟಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 19:31 IST
Last Updated 21 ಜೂನ್ 2022, 19:31 IST
ಯಶವಂತ ಸಿನ್ಹಾ ಮತ್ತು ದ್ರೌಪದಿ ಮುರ್ಮು
ಯಶವಂತ ಸಿನ್ಹಾ ಮತ್ತು ದ್ರೌಪದಿ ಮುರ್ಮು   

ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಅಖಾಡ ಸಜ್ಜಾಗಿದೆ. ಎನ್‌ಡಿಎಯೇತರ ಪಕ್ಷಗಳು ಯಶವಂತ ಸಿನ್ಹಾ ಅವರನ್ನು ಆಯ್ಕೆ ಮಾಡಿ ಕೆಲವು ತಾಸು ಬಳಿಕ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಜಾರ್ಖಂಡ್‌ನ ರಾಜ್ಯಪಾಲೆಯಾಗಿದ್ದ ದ್ರೌಪದಿ ಮುರ್ಮು ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮಂಗಳವಾರ ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮುರ್ಮು ಅವರನ್ನು ಆಯ್ಕೆ ಮಾಡಲಾಯಿತು.

ಬುಡಕಟ್ಟು ಸಮುದಾಯದ ಮುರ್ಮು ಅವರು ಒಡಿಶಾದವರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನೇ ರಾಷ್ಟ್ರಪತಿ ಅಭ್ಯರ್ಥಿ ಮಾಡಲಾಗುವುದು ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಮುರ್ಮು ಅವರ ಆಯ್ಕೆಯಿಂದಾಗಿ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎಯೇತರ ಪಕ್ಷಗಳ ಸಹಮತದ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವ ಸಿನ್ಹಾ ಅವರನ್ನು ಮಂಗಳವಾರ ಆಯ್ಕೆ ಮಾಡಲಾಗಿದೆ. ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ.

ADVERTISEMENT

ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಸಂಸತ್ ಭವನದಲ್ಲಿ ನಡೆದ ಸಭೆಯಲ್ಲಿ ಸಿನ್ಹಾ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು. 15 ಪಕ್ಷಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು. ಸಿನ್ಹಾ ಅವರು ಪಕ್ಷಾತೀತ ಅಭ್ಯರ್ಥಿಯಾಗಬೇಕು ಎಂಬ ಕಾರಣಕ್ಕೆ ಅವರು ತೃಣಮೂಲ ಕಾಂಗ್ರೆಸ್‌ ತೊರೆಯಬೇಕು ಎಂದು ಕಾಂಗ್ರೆಸ್‌, ಸಿಪಿಎಂ, ಸಿಪಿಐ ಒತ್ತಾಯಿಸಿದವು. ಹೀಗಾಗಿ, ಸಿನ್ಹಾ ಅವರು ತೃಣಮೂಲ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

ಶರದ್‌ ಪವಾರ್‌, ನ್ಯಾಷನಲ್‌ ಕಾನ್ಫರೆನ್ಸ್‌ನ ಫಾರೂಕ್‌ ಅಬ್ದುಲ್ಲಾ ಮತ್ತು ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರು ಅಭ್ಯರ್ಥಿಯಾಗಲು ಒಪ್ಪದ ಕಾರಣ ಸಿನ್ಹಾ ಹೆಸರು ಮುನ್ನೆಲೆಗೆ ಬಂದಿತ್ತು.

ದೀರ್ಘ ಕಾಲ ಬಿಜೆಪಿಯಲ್ಲಿದ್ದು, ಕಳೆದ ವರ್ಷ ತೃಣಮೂಲ ಕಾಂಗ್ರೆಸ್ ಸೇರಿದ್ದ ಸಿನ್ಹಾ ಅವರ ಹೆಸರನ್ನು ಎರಡು ಸುತ್ತಿನ ಸಮಾಲೋಚನೆ ಬಳಿಕ ಅಂತಿಮಗೊಳಿಸಲಾಯಿತು. ಆಡಳಿತಾರೂಢ ಎನ್‌ಡಿಎ ಬಹುಮತದ ಸನಿಹದಲ್ಲಿದೆ. ಹಾಗಾಗಿ, ವಿರೋಧ ಪಕ್ಷಗಳ ಸಹಮತದ ಅಭ್ಯರ್ಥಿಯ ಗೆಲುವು ಸುಲಭವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.