ಲಖನೌ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಭಾರತ ರತ್ನ ಡಾ.ಅಂಬೇಡ್ಕರ್ ಸ್ಮಾರಕ ಮತ್ತು ಸಾಂಸ್ಕೃತಿಕ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿದರು.
ಇಲ್ಲಿನ ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಅವರು ಕೇಂದ್ರದ ಶಂಕುಸ್ಥಾಪನೆ ನೇರವೇರಿಸಿದರು.ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ , ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ದಿನೇಶ್ ಶರ್ಮಾ ಭಾಗವಹಿಸಿದ್ದರು.
ಲಖನೌಗೆ ಎರಡು ದಿನ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಕೋವಿಂದ್ ಅವರು ಸೋಮವಾರ ಬೆಳಿಗ್ಗೆ ಕಾನ್ಪುರಕ್ಕೆ ಆಗಮಿಸಿದ್ದು, ಮಂಗಳವಾರ ಸಂಜೆ ದೆಹಲಿಗೆ ಹಿಂತಿರುಗಲಿದ್ದಾರೆ.
ಐಶ್ಭಾಗ್ನಲ್ಲಿ ಡಾ.ಅಂಬೇಡ್ಕರ್ ಸ್ಮಾರಕ ಮತ್ತು ಸಾಂಸ್ಕೃತಿಕ ಕೇಂದ್ರ ನಿರ್ಮಾಣಕ್ಕೆ ಉತ್ತರ ಪ್ರದೇಶ ಸಂಪುಟವುಕಳೆದ ವಾರ ಅನುಮೋದನೆ ನೀಡಿತ್ತು.
ಐಶ್ಬಾಗ್ ಈದ್ಗಾನಲ್ಲಿ 5493.52 ಚದರ ಮೀಟರ್ ಪ್ರದೇಶದಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗುವುದು. ಅಲ್ಲದೆ ಇಲ್ಲಿ 25 ಅಡಿ ಎತ್ತರದ ಡಾ.ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಿಸಲಾಗುವುದು. ಇದಕ್ಕೆ ಒಟ್ಟು ₹45.04 ಕೋಟಿ ವೆಚ್ಚವಾಗಲಿದೆ. ಈ ಸ್ಮಾರಕದಲ್ಲಿ 750 ಜನರ ಸಾಮರ್ಥ್ಯವಿರುವ ಸಭಾಂಗಣ, ಗ್ರಂಥಾಲಯ, ಸಂಶೋಧನಾ ಕೇಂದ್ರ, ಚಿತ್ರ ಗ್ಯಾಲರಿ, ಮ್ಯೂಸಿಯಂ, ಬಹುಪಯೋಗಿ ಸಮಾವೇಶ ಕೇಂದ್ರ, ಕೆಫೆಟೇರಿಯಾ, ವಸತಿ ನಿಲಯ ಮತ್ತು ಇತರ ಸೌಲಭ್ಯಗಳಿರುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.