ಕಮರ್ಪರಾ (ಪಶ್ಚಿಮ ಬಂಗಾಳ): ಪ್ರಧಾನಿ ವಿದೇಶ ಪ್ರವಾಸ ಕೈಗೊಳ್ಳುವುದರಲ್ಲಿಯೇ ಬ್ಯುಸಿಯಾಗಿರುತ್ತಾರೆ ಎಂಬ ವಿಪಕ್ಷಗಳ ಟೀಕೆಗೆ ಉತ್ತರಿಸಿದ ಮೋದಿ, ತಾನು ಈ ರೀತಿ ವಿದೇಶ ಪ್ರವಾಸ ಕೈಗೊಳ್ಳುತ್ತಿರುವುದರಿಂದಲೇ ಭಾರತಕ್ಕೆ ಜಾಗತಿಕಮನ್ನಣೆ ಸಿಗುತ್ತಿದೆ ಎಂದಿದ್ದಾರೆ.
ಬುಧವಾರ ಕೋಲ್ಕತ್ತದ ಬಿರ್ಭುಮ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮಾಡಿದ ನರೇಂದ್ರ ಮೋದಿ, ಐದು ವರ್ಷಗಳ ಹಿಂದೆ ಭಾರತದ ದನಿ ಕೇಳಿಸುವುದೇ ಕಷ್ಟವಾಗಿತ್ತು.ಆದರೆ ಈಗ ಜಗತ್ತೇ ಭಾರತದ ಜತೆಗೆ ನಿಂತಿದೆ.
ಚಾಯ್ವಾಲಾ ಈ ಐದು ವರ್ಷವಿಡೀ ವಿದೇಶ ಪ್ರವಾಸ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ದೀದಿ ಹೇಳಿರುವುದನ್ನು ನಾನು ಎಲ್ಲೋ ಓದಿದೆ. ಆದರೆ ಆ ಭೇಟಿಯಿಂದಾಗಿ ಭಾರತ ಎಲ್ಲಿ ಹೋದರೂ ಗೌರವ ಗಳಿಸುತ್ತಿದೆ ಎಂದಿದ್ದಾರೆ ಮೋದಿ.
ಇಲ್ಲಿಯೂ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, 20-25 ಸೀಟುಗಳಲ್ಲಿ ಸ್ಪರ್ಧಿಸುತ್ತಿರುವ ಪಕ್ಷಗಳ ನಾಯಕರೂ ಪ್ರಧಾನಿಯಾಗಲು ಬಯಸುತ್ತಾರೆ.ಎಲ್ಲರೂ ಗೆಜ್ಜೆ ಕಟ್ಟಿ ಸಿದ್ಧರಾಗಿದ್ದಾರೆ ಎಂದಿದ್ದಾರೆ.
ಶಾಂತರೀತಿಯಲ್ಲಿ ಮತದಾನ ನಡೆಯಲು ಕಾರಣವಾದ ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳಿದ ಮೋದಿ, ಈ ಕಾರಣದಿಂದಲೇ ದೀದಿ ಚುನಾವಣಾ ಆಯೋಗದ ಮೇಲೆ ಸಿಟ್ಟುಗೊಂಡಿದ್ದಾರೆ.ಮೂರು ಹಂತದ ಮತದಾನ ಮುಗಿದ ನಂತರ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ಸೂರ್ಯ ಮುಳುಗುತ್ತಿದ್ದಾನೆ ಎಂಬುದು ಸ್ಪಷ್ಟವಾಗಿದೆ. ದೀದಿ ಬಳಿ ಗೂಂಡಾಗಳ ಶಕ್ತಿ ಇದ್ದರೆ, ನಮ್ಮಲ್ಲಿ ಪ್ರಜಾಪ್ರಭುತ್ವದ ಸಾಮರ್ಥ್ಯ ಇದೆ ಎಂದು ಮೋದಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.