ADVERTISEMENT

Independence Day| ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದ ಪ್ರಮುಖಾಂಶಗಳು 

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 4:07 IST
Last Updated 15 ಆಗಸ್ಟ್ 2021, 4:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿದರು. ನಂತರ ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.

ಭಾಷಣದ ವೇಳೆ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಭಾಷಣದ ಪ್ರಮುಖಾಂಶಗಳು ಇಲ್ಲಿವೆ

ADVERTISEMENT

–ದೇಶದ ಎಲ್ಲ ಯೋಜನೆಗಳು ಶೇ 100ರಷ್ಟು ಜನರಿಗೆ ಸಂಪೂರ್ಣ ತಲುಪಬೇಕು.

–ಕಠಿಣ ಸಮಯದಲ್ಲಿ ದೇಶದ ಅಸಾಮಾನ್ಯ ಹೋರಾಟ ನಡೆಸಿದೆ. ಕರ್ತವ್ಯದ ಮೂಲಕ ಕೋವಿಡ್‌ ಎದುರು ಸಮರವನ್ನು ನಡೆಸಿದೆ. ಸಾಕಷ್ಟು ತಾಳ್ಮೆಯಿಂದ ಕೋವಿಡ್‌ ವಿರುದ್ಧ ಹೋರಾಟ ನಡೆಸಿದೆ.

–ಈವರೆಗೂ ದೇಶದ 54 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್‌ ಲಸಿಕೆ ತಲುಪಿದೆ.

–'ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌– ಸಬ್‌ಕಾ ವಿಶ್ವಾಸ್‌'ನಲ್ಲಿ ನಾವೆಲ್ಲರೂ ನಂಬಿಕೆ ಇಟ್ಟಿದ್ದೇವೆ. ನಮ್ಮ ಎಲ್ಲರ ಗುರಿಯನ್ನು ಸಾಧಿಸಲು 'ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌–ಸಬ್‌ಕಾ ವಿಶ್ವಾಸ್‌ ಮತ್ತು ಸಬ್‌ಕಾ ಪ್ರಯಾಸ್‌ – ಎಲ್ಲರ ಜೊತೆ, ಎಲ್ಲರ ಏಳ್ಗೆ– ಎಲ್ಲರ ಪ್ರಯತ್ನ’ ಅತ್ಯಗತ್ಯವಾಗಿದೆ ಎಂದು ನಾನು ಈಗ ಘೋಷಣೆ ಮಾಡುತ್ತಿದ್ದೇನೆ.

–ಲಡಾಖ್‌ನಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಲಡಾಖ್‌ನ 'ಇಂಡಸ್‌ ಸೆಂಟ್ರಲ್‌ ಯೂನಿವರ್ಸಿಟಿ' ದೇಶದ ಉನ್ನತ ಶಿಕ್ಷಣ ಕೇಂದ್ರವಾಗಲಿದೆ.

–ಆಧುನಿಕ ಜಗತ್ತಿನಲ್ಲಿ ಎಲ್ಲ ರೀತಿಯ ತಂತ್ರಜ್ಞಾನ, ಮೂಲಸೌಕರ್ಯಗಳ ಅಭಿವೃದ್ಧಿಗೆ, ಅಳವಡಿಕೆಗೆ ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕಿದೆ.

–ಭಾರತ ಸರ್ಕಾರವು ಇ–ಕಾಮರ್ಸ್‌ ವೇದಿಕೆ ಶುರು ಮಾಡಲಿದ್ದು, ಹಳ್ಳಿಯ ಕರಕುಶಲಕರ್ಮಿಗಳಿಗೆ ಜಗತ್ತಿನೊಂದಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ. ಹಳ್ಳಿಯ ಅಭಿವೃದ್ಧಿ ಪಥವು ಹೊಸ ಆಯಾಮವನ್ನು ಪಡೆಯುತ್ತಿದೆ. ಹಳ್ಳಿಗಳಲ್ಲಿ ಡಿಜಿಟಲ್‌ ಉದ್ಯಮಿಗಳೂ ರೂಪುಗೊಳ್ಳುತ್ತಿದ್ದಾರೆ.

–ಸ್ವಾಮಿತ್ವ ಯೋಜನೆಯು ಗ್ರಾಮೀಣ ಭಾರತದ ಬದುಕನ್ನು ಬದಲಿಸುತ್ತಿದೆ. ಗ್ರಾಮೀಣ ಜನರ ಭೂಮಿ ನಕ್ಷೆ ರೂಪಿಸಲು ಡ್ರೋನ್‌ಗಳು ಸಹಕಾರಿಯಾಗಿವೆ .

–'ಸಣ್ಣ ಇಳುವರಿದಾರರ ಮೇಲೆ ಸರ್ಕಾರ ಗಮನಹರಿಸಿದೆ. 10 ಕೋಟಿ ರೈತ ಕುಟುಂಬಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ₹1.5 ಲಕ್ಷ ಕೋಟಿ ಸಂದಾಯವಾಗಿದೆ'.

–ದೇಶದ 75ನೇ ಸ್ವಾತಂತ್ರೋತ್ಸವದ 75 ವಾರಗಳ ಆಚರಣೆಗೆ ಪಣತೊಟ್ಟಿದ್ದೇವೆ. 2021ರ ಮಾರ್ಚ್‌ 12ರಿಂದ 2023ರ ಆಗಸ್ಟ್‌ 15ರವರೆಗೂ 'ಅಮೃತ ಮಹೋತ್ಸವ' ನಡೆಯಲಿದೆ. ಭಾರತೀಯ ರೈಲ್ವೆ ಸಹ ದೇಶದ ಜೊತೆಗೆ ಮಹತ್ತರ ಪರಿವರ್ತನೆಯನ್ನು ಕಂಡಿದೆ.

–ಭಾರತದಲ್ಲಿರುವ ಎಲ್ಲ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ ಸಿಗಲಿದ್ದು, ಅಲ್ಲಿ ಶಿಕ್ಷಣ ಪಡೆಯಬಹುದಾಗಿದೆ.

–ರಾಷ್ಟ್ರೀಯ ಹೈಡ್ರೋಜನ್‌ ಮಿಷನ್‌ ಘೋಷಣೆ. ನಾವು ಭಾರತವನ್ನು ಹಸಿರು ಜಲಜನಕದ ಉತ್ಪಾದನೆ ಮತ್ತು ರಫ್ತು ಮಾಡುವ ಕೇಂದ್ರವನ್ನಾಗಿಸಬೇಕು.

–ಜನ ಔಷಧಿ ಯೋಜನೆಯಿಂದಾಗಿ ಬಡವರು, ಅಗತ್ಯವಿರುವವರಿಗೆ ಕೈಗೆಟುಕುವ ದರದಲ್ಲಿ ಔಷಧಗಳು ಸಿಗುತ್ತಿವೆ. 75,000 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬ್ಲಾಕ್‌ ಮಟ್ಟದಲ್ಲಿ ಆಸ್ಪತ್ರೆಗಳ ಸಂಪರ್ಕದ ಕುರಿತು ಕಾರ್ಯಾಚರಿಸುತ್ತಿದ್ದೇವೆ.

–ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಿದೆ. ವಿದ್ಯಾರ್ಥಿಗಳು ತಮ್ಮ ಮನಸ್ಸಿಗೆ ಆಪ್ತವಾಗಿರುವ ಭಾಷೆಯಲ್ಲಿ ಪಾಠವನ್ನು ಕಲಿಯಲು ಅವಕಾಶವಾದರೆ, ಖಂಡಿತವಾಗಿಯು ಅದು ದೊಡ್ಡ ವಿಶ್ವಾಸವನ್ನು ಮೂಡಿಸಲಿದೆ ಎಂದು ಪ್ರಧಾನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.