ADVERTISEMENT

ಜಾಹೀರಾತಿಗಾಗಿ ಕೇಂದ್ರದಿಂದ ದೋಚಿದ್ದು ₹62.24 ಲಕ್ಷ!

ಮುದ್ರಿಸಿದ್ದು 500ರಿಂದ 1000 ಪ್ರತಿ; ಪ್ರಸರಣ ಲೆಕ್ಕ ತೋರಿಸಿದ್ದು 1.5 ಲಕ್ಷ ಪ್ರತಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 13:58 IST
Last Updated 12 ಜುಲೈ 2021, 13:58 IST
Central Bureau of Investigation
Central Bureau of Investigation   

ನವದೆಹಲಿ: ಆರು ಸುದ್ದಿ ಪತ್ರಿಕೆಗಳನ್ನು 500ರಿಂದ 1 ಸಾವಿರ ಪ್ರತಿಗಳನ್ನು ಮಾತ್ರ ಮುದ್ರಿಸಿ, ಪ್ರತಿ ದಿನ 1.5 ಲಕ್ಷ ಪ್ರತಿಗಳ ಪ್ರಸಾರದ ಸುಳ್ಳು ಲೆಕ್ಕತೋರಿಸಿ ಕೇಂದ್ರ ಸರ್ಕಾರದಿಂದ ₹62.24 ಲಕ್ಷವನ್ನು ಜಾಹೀರಾತಿಗಾಗಿ ಪಡೆದ ಹಗರಣವೊಂದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ದಂಪತಿ ಸಹಚರರ ಜತೆಗೆ ಸೇರಿ ಆರು ಸುದ್ದಿ ಪತ್ರಿಕೆಗಳ ಹೆಸರಿನಲ್ಲಿ 2016 ಮತ್ತು 2019ರ ನಡುವೆ ಇಷ್ಟೊಂದು ಮೊತ್ತವನ್ನು ಜಾಹೀರಾತಿಗಾಗಿ ಪಡೆದುಕೊಂಡು ಸಿಕ್ಕಿಬಿದ್ದಿದ್ದಾರೆ.

ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ಈ ಹಗರಣದ ತನಿಖೆ ನಡೆಸಿರುವ ಸಿಬಿಐ, ಕೇಂದ್ರ ಸರ್ಕಾರದ ಜಾಹೀರಾತು ಪಡೆಯಲು ದಂಪತಿಯ ಒಡೆತನದ ಆರು ಪತ್ರಿಕೆಗಳನ್ನು ಬುಕ್‌ಮಾಡಿಕೊಂಡಿರುವುದಕ್ಕೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ಬ್ಯೂರೋ ಆಫ್ ಔಟ್‌ರೀಚ್‌ ಅಂಡ್‌ ಕಮ್ಯುನಿಕೇಷನ್‌ (ಬಿಒಸಿ)ಗೆ ಸಂಬಂಧಿಸಿದ, ಹೆಸರಿಸದ ಮೂವರು ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಿದೆ.

ADVERTISEMENT

ಚಾರ್ಟರ್ಡ್ ಅಕೌಂಟೆಂಟ್ಸ್ ಪ್ರಮಾಣಪತ್ರಗಳು ಸೇರಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದ ಮೇಲೆ ದಂಪತಿಗಳಾದ ಹರೀಶ್ ಲಾಂಬಾ ಮತ್ತು ಆರತಿ ಹಾಗೂ ಅವರ ಸಹಚರ ಅರ್ಜುನ್ ಟೈಮ್ಸ್ ಪ್ರಕಾಶಕ ಅಶ್ವನಿ ಕುಮಾರ್ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.

ಅರ್ಜುನ್ ಟೈಮ್ಸ್ (ದೆಹಲಿ), ಹೆಲ್ತ್ ಆಫ್ ಭಾರತ್ (ದೆಹಲಿ), ಡೈನಿಕ್ ಅಮನ್, ದೆಹಲಿ ಹೆಲ್ತ್, ಅರ್ಜುನ್ ಟೈಮ್ಸ್ (ಗ್ವಾಲಿಯರ್) ಮತ್ತು ಹೆಲ್ತ್ ಆಫ್ ಭಾರತ್ (ಗುರುಗ್ರಾಮ) ಈ ಪತ್ರಿಕೆಗಳ ಹೆಸರಿನಲ್ಲಿ ಕೇಂದ್ರದ ಜಾಹೀರಾತು ಪಡೆಯಲಾಗಿದೆ. ಆದರೆ, ಈ ಪತ್ರಿಕೆಗಳು ಜಾಹೀರಾತು ಪಡೆಯಲು ಸಚಿವಾಲಯ ನಿಗದಿ‍ಪಡಿಸಿರುವಷ್ಟು ಪ್ರಸರಣ ಸಂಖ್ಯೆ ಹೊಂದಿರಲಿಲ್ಲ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ.

2016 ಮತ್ತು 2019 ರ ನಡುವಿನ ಅವಧಿಯಲ್ಲಿ ₹ 62.24 ಲಕ್ಷ ಪಡೆದಿದ್ದರೆ, ಕೇಂದ್ರ ಸರ್ಕಾರದ ಜಾಹೀರಾತಿಗಾಗಿ ಈ ಪತ್ರಿಕೆಗಳನ್ನು ಬುಕ್‌ ಮಾಡಿಕೊಂಡಿರುವ ಪ್ರಾರಂಭದಿಂದ ಲೆಕ್ಕ ಹಾಕಿದರೆ ಈ ಮೊತ್ತವು ಹೆಚ್ಚಾಗಬಹುದು ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.