ಭೋಪಾಲ್:ಮಧ್ಯಪ್ರದೇಶದಲ್ಲಿ ಆಯೋಜಿಸಿದ್ದ ರ್ಯಾಲಿ ಸಂದರ್ಭದಲ್ಲಿ ಬೆಂಬಲಿಗರನ್ನು ಭೇಟಿ ಮಾಡುವ ಸಲುವಾಗಿ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಬ್ಯಾರಿಕೇಡ್ ಅನ್ನು ದಾಟಿದ ವಿಡಿಯೊವೈರಲ್ ಆಗಿದೆ.
ಇಲ್ಲಿನ ರತ್ಲಂ ನಲ್ಲಿರುವ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಅವರು ಪಕ್ಷದ ಅಭ್ಯರ್ಥಿ ಕಾಂತಿಲಾಲ್ ಭುರಿಯಾ ಪರವಾಗಿ ಮತಯಾಚಿಸಿದರು.ಕಾರ್ಯಕ್ರಮ ಮುಗಿಸಿ ತೆರಳುವ ಸಂದರ್ಭ ‘ಪ್ರಿಯಾಂಕ ದೀದಿ’ ಕೂಗು ಜೋರಾಯಿತು. ಇದರಿಂದ ಪುಳಕಿತಗೊಂಡ ಪ್ರಿಯಾಂಕ ಅಡ್ಡಲಾಗಿ ಹಾಕಲಾಗಿದ್ದ ಮರದಅಡೆತಡೆಯನ್ನು ದಾಟಿ ಬೆಂಬಲಿಗರತ್ತ ತೆರಳಿದರು.
ಭಾರಿ ಬಿಗಿಭದ್ರತೆ ಹೊಂದಿರುವ ಸೆಲೆಬ್ರಿಟಿ ನಾಯಕರಲ್ಲಿ ಪ್ರಿಯಾಂಕ ಅವರೂ ಒಬ್ಬರಾಗಿದ್ದು, ಪ್ರಿಯಾಂಕ ಅಡೆತಡೆ ದಾಟುವ ಸಂದರ್ಭ ಅಂಗರಕ್ಷಕರು ಪ್ರಯಾಸಪಟ್ಟರು.
ಈ ಹಿಂದೆ ಪ್ರಿಯಾಂಕ ಅಜ್ಜಿ ಇಂದಿರಾ ಗಾಂಧಿ ಅವರೂ ಬೆಂಬಲಿಗರನ್ನು ಭೇಟಿ ಮಾಡುವ ಸಲುವಾಗಿ ಅಡೆತಡೆಯನ್ನು ದಾಟಿದ್ದರು. ಹೀಗಾಗಿ ಪ್ರಿಯಾಂಕ ಅವರನ್ನು ಇಂದಿರಾಗೆ ಹೋಲಿಸಲಾಯಿತು.
ಪ್ರಿಯಾಂಕ ಅವರು2009ರಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ಕೊನೆಯ ಸಲ ಇಲ್ಲಿಗೆ ಬಂದಿದ್ದರು. ಪ್ರಿಯಾಂಕ ಅಜ್ಜಿ ಇಂದಿರಾ ಗಾಂಧಿ ಹಾಗೂ ಮುತ್ತಾತ ನೆಹರೂ ಅವರೂ ಈ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.