ADVERTISEMENT

ಭತ್ತ ಖರೀದಿಯಲ್ಲಿ ಭ್ರಷ್ಟಾಚಾರ: ಕೇಂದ್ರದ ವಿರುದ್ಧ ಪ್ರಿಯಾಂಕ ವಾಗ್ದಾಳಿ

ಉತ್ತರ ಪ್ರದೇಶದಲ್ಲಿ ಎಂಎಸ್‌ಪಿ ಬೆಲೆಗಿಂತ ಕಡಿಮೆ ಬೆಲೆಗೆ ಭತ್ತ ಮಾರಾಟ

ಪಿಟಿಐ
Published 21 ಅಕ್ಟೋಬರ್ 2020, 10:32 IST
Last Updated 21 ಅಕ್ಟೋಬರ್ 2020, 10:32 IST
ಪ್ರಿಯಾಂಕಾ ವಾದ್ರಾ
ಪ್ರಿಯಾಂಕಾ ವಾದ್ರಾ   

ನವದೆಹಲಿ: ‘ಉತ್ತರ ಪ್ರದೇಶದ ರೈತರು ಬಲವಂತವಾಗಿ ಭತ್ತವನ್ನು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಅವರ ನೋವನ್ನು ಕೇಂದ್ರ ಸರ್ಕಾರ ಆಲಿಸುತ್ತಿಲ್ಲ‘ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ್ದು, ಮೊಹಮ್ಮದಿ ಖಿರಿ ಮಂಡಿಯಲ್ಲಿ ಭತ್ತ ಖರೀದಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ರೈತರೊಬ್ಬರು ಮಾತನಾಡಿರುವ ವಿಡಿಯೊವನ್ನು ಅದರೊಂದಿಗೆ ಪೋಸ್ಟ್‌ ಮಾಡಿದ್ದಾರೆ.‘

‘ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಉತ್ತರ ಪ್ರದೇಶ ಸರ್ಕಾರ ಕೃಷಿ ಕಾನೂನುಗಳ ಕುರಿತು ಖಾತ್‌ ಸಮ್ಮೇಳನ ನಡೆಸುತ್ತಿದ್ದು, ರೈತರ ನೋವನ್ನು ಆಲಿಸುತ್ತಿಲ್ಲ‘ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಉತ್ತರ ಪ್ರದೇಶದ ಬಹುತೇಕ ಕಡೆ ರೈತರು ಬಲವಂತವಾಗಿ ತಾವು ಬೆಳೆದ ಭತ್ತವನ್ನು ಕ್ವಿಂಟಲ್‌ಗೆ ₹1000 ದಿಂದ ₹1100 ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಕ್ವಿಂಟಲ್ ಭತ್ತಕ್ಕೆ ಸರ್ಕಾರ ₹1860 ಬೆಂಬಲ ಬೆಲೆ ನಿಗದಿ ಮಾಡಿದೆ‘ ಎಂದು ಅವರು ಉಲ್ಲೇಖಿಸಿದ್ದಾರೆ.

‘ಯಾವಾಗ ಬೆಂಬಲ ಬೆಲೆಯನ್ನು ಖಾತರಿ ಪಡಿಸುವುದಿಲ್ಲವೋ, ಆಗ ಇಂಥ ಪ್ರಕರಣಗಳು ನಡೆಯುತ್ತವೆ. ಇಲ್ಲಿ ಬೆಂಬಲ ಬೆಲೆ ಖಾತರಿ ಪಡೆಸಿಲ್ಲ‘ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಪಂಜಾಬ್‌ ಸರ್ಕಾರ ಮಂಗಳವಾರವಷ್ಟೇ ವಿಧಾನಸಭೆಯಲ್ಲಿ ಕೇಂದ್ರ ಕೃಷಿ ಕಾನೂನುಗಳ ವಿರುದ್ಧ, ನಾಲ್ಕು ಮಸೂದೆಗಳನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಈ ಘಟನೆಯ ನಂತರ, ಪ್ರಿಯಾಂಕಾ ಅವರು ಕೃಷಿ ಕಾನೂನುಗಳನ್ನು ಉಲ್ಲೇಖಿಸಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.