ಗುವಾಹಟಿ: ‘ಅಸ್ಸಾಂನ ಬಿಜೆಪಿ ನಾಯಕರು ಮಹಾಭಾರತದ ಧೃತರಾಷ್ಟ್ರ ಮತ್ತು ಶಕುನಿಯಂತೆ ಕೆಲಸ ಮಾಡುತ್ತಿದ್ದಾರೆ. ಜನರ ನಾಯಕ ಎಂದು ಹೆಸರಾಗಿರುವ ಬಿಜೆಪಿಯ ನಾಯಕರೊಬ್ಬರು ಧೃತರಾಷ್ಟ್ರನಂತೆ ವರ್ತಿಸುತ್ತಿದ್ದಾರೆ. ಹಿಂದಿನ ಚುನಾವಣೆಯ ವೇಳೆ ಅವರು ರಾಜ್ಯದ ಆರು ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಸ್ಥಾನ ನೀಡುವುದಾಗಿ ಹೇಳಿದ್ದರು. ಆದರೆ ಅವರ ಸರ್ಕಾರ ಬಂದು ಅದರ ಅವಧಿ ಮುಗಿದರೂ, ಆ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಸ್ಥಾನ ನೀಡಿಲ್ಲ. ಅವರು ಜನರನ್ನು ವಂಚಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.
‘ಬಿಜೆಪಿಯ ಮತ್ತೊಬ್ಬ ನಾಯಕ ಶಕುನಿಯಂತೆ ಸರ್ಕಾರವನ್ನು ನಡೆಸುತ್ತಿದ್ದಾರೆ. ಅವರ ಸರ್ಕಾರವು ಭ್ರಷ್ಟ ಆಡಳಿತ ನಡೆಸುತ್ತಿದ್ದು, ಜನರನ್ನು ವಂಚಿಸುತ್ತಿವೆ’ ಎಂದು ಅವರು ಆರೋಪಿಸಿದ್ದಾರೆ.
‘ಅಸ್ಸಾಂ ಚುನಾವಣೆಯಲ್ಲಿ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ನಿರ್ಧಾರ ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ಅವರಿಗೆ ತಮ್ಮದೇ ಮುಖ್ಯಮಂತ್ರಿಯ ಮೇಲೆ ನಂಬಿಕೆ ಇಲ್ಲ. ಹೀಗಾಗಿಯೇ ಅವರೇ ಮತ್ತೆ ಮುಖ್ಯಮಂತ್ರಿಯ ಅಭ್ಯರ್ಥಿಯಾಗುತ್ತಾರೆ ಎಂದು ಹೇಳುತ್ತಿಲ್ಲ. ಅವರ ಪಕ್ಷದಲ್ಲೇ ಒಗ್ಗಟ್ಟು ಮತ್ತು ಸ್ಥಿರತೆ ಇಲ್ಲ. ಹೀಗಿದ್ದ ಮೇಲೆ ಅಸ್ಸಾಂನಲ್ಲಿ ಬಿಜೆಪಿಯು ಸ್ಥಿರ ಸರ್ಕಾರವನ್ನು ಹೇಗೆ ತರುತ್ತದೆ? ರಾಜ್ಯದಲ್ಲಿ ಸ್ಥಿರತೆ ಹೇಗೆ ತರುತ್ತದೆ’ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
‘ಸಿಎಎ ನಂತರ ಅಸ್ಸಾಂ ಬದಲಾಗಿದೆ’: ‘ಪೌರತ್ವ ತಿದ್ದುಪಡಿ ಕಾಯ್ದೆಯ ನಂತರ ಅಸ್ಸಾಂ ಸಿಎಎ ಪರ ಮತ್ತು ಸಿಎಎ ವಿರುದ್ಧ ಎಂದು ವಿಭಜನೆಯಾಗಿದೆ. ಸಿಎಎ ವಿರುದ್ಧ ಇರುವವರೆಲ್ಲರೂ ಈಗ ಒಗ್ಗಟ್ಟಾಗಿದ್ದಾರೆ’ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಹೇಳಿದ್ದಾರೆ. ‘ನಮ್ಮ ತಂದೆ ತರುಣ್ ಗೊಗೊಯಿ ಅವರು ಎಐಯುಡಿಎಫ್ ಜತೆ ಮೈತ್ರಿ ಮಾಡಿಕೊಂಡಿರಲಿಲ್ಲ. ಆದರೆ, ಈಗ ಸ್ಥಿತಿ ಬದಲಾಗಿದೆ. ಸಿಎಎ ವಿರುದ್ಧದ ಪಕ್ಷಗಳೆಲ್ಲವೂ ಒಂದಾಗಬೇಕು ಎಂದು ಮೊದಲು ಹೇಳಿದವನು ನಾನೇ. ಈ ಕಾರಣದಿಂದಲೇ ಕಾಂಗ್ರೆಸ್ ಎಐಯುಡಿಎಫ್ ಜತೆ ಕೈಜೋಡಿಸಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.