ಲಖನೌ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ‘ಟ್ವಿಟ್ಟರ್ ವಾದ್ರಾ’ ಎಂದು ಲೇವಡಿ ಮಾಡಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು, ‘ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 7 ಸ್ಥಾನಗಳನ್ನು ಪಡೆದರೆ ಅದುವೇ ಅದರ ದೊಡ್ಡ ಸಾಧನೆ’ ಎಂದು ವ್ಯಂಗ್ಯವಾಡಿದ್ದಾರೆ.
‘ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಬರು ಸಂಸದರು ಹಾಗೂ 2019ರಲ್ಲಿ ಒಬ್ಬ ಸಂಸದ ಮಾತ್ರ ಆಯ್ಕೆಯಾಗಿದ್ದಾರೆ. ಅಂತೆಯೇ 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 7 ಸ್ಥಾನ ಪಡೆದಿತ್ತು. 2022ರ ಚುನಾವಣೆಯಲ್ಲೂ ಈ 7 ಸ್ಥಾನಗಳ ಅಂಕಿ ಪುನರಾವರ್ತಿಸಲು ಯಶಸ್ವಿಯಾದರೆ ಅದು ದೊಡ್ಡ ಸಾಧನೆಯಾಗಲಿದೆ’ ಎಂದು ಮೌರ್ಯ ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಎಸ್ಪಿ ಮತ್ತು ಬಿಎಸ್ಪಿಯ ಸ್ಥಿತಿಯೂ ಬಹುತೇಕ ಇದೇ ಆಗಿದೆ. ಜನರು ಅವರ ಆಡಳಿತಾವಧಿಯನ್ನು ಮರೆತಿಲ್ಲ, ಮರೆಯುವುದೂ ಇಲ್ಲ. ಎರಡೂ ಪಕ್ಷಗಳು ಹಿಂದುಳಿದವರು, ದಲಿತರು ಮತ್ತು ಮೇಲ್ಜಾತಿಗಳ ಬಗ್ಗೆ ಮಾತನಾಡುತ್ತಿವೆಯಾದರೂ, ಅವು ಯಾರ ಹಿತೈಷಿಗಳೂ ಅಲ್ಲ. ಅವರು ಅಧಿಕಾರವನ್ನು ಬಯಸುತ್ತಾರೆ. ಜನರನ್ನು ಶೋಷಿಸಿ ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಾರೆ’ ಎಂದು ಮೌರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.