ಅನಂತಪುರ: ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆಯಲಿದ್ದು, ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಗಡಿ ಜಿಲ್ಲೆ ಅನಂತಪುರದಲ್ಲಿ ಚಾಲನೆ ನೀಡಿದರು.
ಈ ವೇಳೆ, ಅರ್ಹ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ₹5 ಸಾವಿರ ನೀಡುವುದಾಗಿ ಭರವಸೆ ನೀಡಿದ್ದಾರೆ.
‘ಇದು ಕೇವಲ ಭರವಸೆಯಲ್ಲ... ಇದು ಬಡವರ ಗ್ಯಾರಂಟಿ. ಬಡ ಕುಟುಂಬಗಳಿಗೆ ನಾವು ಭರವಸೆ ನೀಡುತ್ತಿದ್ದೇವೆ. ಪ್ರತಿ ತಿಂಗಳು ನಿಮ್ಮ ಖಾತೆಗೆ ₹5 ಸಾವಿರ ಬೀಳಲಿದೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ನೀಡಿದ ಭರವಸೆಯನ್ನು ನಾವು ಪೂರೈಸಿದ್ದೇವೆ’ ಎಂದು ಹೇಳಿದರು.
‘ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಎನ್ ಸಂಜೀವ ರೆಡ್ಡಿ ಅವರು ಇದೇ ಅನಂತಪುರ ಜಿಲ್ಲೆಯವರು. ಅವಿಭಜಿತ ಆಂಧ್ರಪ್ರದೇಶವು ಮಾಜಿ ಪ್ರಧಾನಿ ದಿವಂಗತ ಪಿ. ವಿ. ನರಸಿಂಹರಾವ್ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ವೈ. ಎಸ್. ರಾಜಶೇಖರ ರೆಡ್ಡಿ ಅವರನ್ನು ದೇಶಕ್ಕೆ ನೀಡಿದೆ. ಮೇದಕ್ ಲೋಕಸಭಾ ಕ್ಷೇತ್ರದಿಂದ ಇಂದಿರಾಗಾಂಧಿ ಅವರು ಸಂಸದರಾಗಿ ಆಯ್ಕೆಯಾಗಿದ್ದರು’ ಎಂದು ಸ್ಮರಿಸಿದರು.
‘ಮೋದಿಗೆ ಹೆದರಿ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಆಂಧ್ರಪ್ರದೇಶವನ್ನು ಗಿರವಿ ಇಟ್ಟಿದ್ದಾರೆ. ಆದರೆ ಶರ್ಮಿಳಾ ರೆಡ್ಡಿ ಆ ದಾರಿಯನ್ನು ಹಿಡಿಯಲಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.