ತಿರುಕೋಯಿಲೂರು (ತಮಿಳುನಾಡು) (ಪಿಟಿಐ): ಡಿಎಂಕೆಗೆ ಮಹಿಳೆಯರ ಬಗ್ಗೆ ಗೌರವವೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಆರೋಪಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರ ತಾಯಿಯ ಬಗ್ಗೆ ಡಿಎಂಕೆ ಮುಖಂಡ ಎ. ರಾಜಾ ಅವರು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ಉಲ್ಲೇಖಿಸಿ ಶಾ ಹೀಗೆ ಹೇಳಿದ್ದಾರೆ.
‘ತಮಿಳುನಾಡಿನ ತಾಯಂದಿರು ಮತ್ತು ಸಹೋದರಿಯರು ಏಪ್ರಿಲ್ 6ರ ಮತದಾನದಲ್ಲಿ ಡಿಎಂಕೆಗೆ ಪಾಠ ಕಲಿಸಬೇಕು’ ಎಂದು ಅವರು ಚುನಾವಣಾ ರ್ಯಾಲಿಯಲ್ಲಿ ಕರೆ ಕೊಟ್ಟಿದ್ದಾರೆ.ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎಂದು ಡಿಎಂಕೆ ಪ್ರಯತ್ನಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.
‘ಡಿಎಂಕೆ ಮುಖಂಡ ಎ. ರಾಜಾ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಮೃತಪಟ್ಟ ಮಹಿಳೆಯರ ಬಗ್ಗೆ ಇಂತಹ ಹೇಳಿಕೆಯನ್ನು ಅವರು ನೀಡಿದ್ದಾರೆ. ಮಹಿಳೆಯರ ಬಗ್ಗೆ ಅವರಿಗೆ ಸ್ವಲ್ಪವೂ ಗೌರವ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಶಾ ಟೀಕಿಸಿದ್ದಾರೆ.
ಜಯಲಲಿತಾ ಅವರ ವಿರುದ್ಧವೂ ಡಿಎಂಕೆ ಹಿಂದೆ ಇಂತಹ ಹೇಳಿಕೆಗಳನ್ನು ನೀಡಿದೆ ಎಂದೂ ಶಾ ನೆನಪಿಸಿದರು. ತಮಿಳುನಾಡಿನ ಚುನಾವಣೆಯು ಅಭಿವೃದ್ಧಿ ಪಥದಲ್ಲಿ ಸಾಗುವ ಎನ್ಡಿಎ ಮತ್ತು ಭ್ರಷ್ಟಾಚಾರ ಹಾಗೂ ವಂಶಾಡಳಿತದ ಯುಪಿಎ ನಡುವಣ ಸಮರ ಎಂದು ಅವರು ಬಣ್ಣಿಸಿದರು. ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳೆರಡಕ್ಕೂ ತಮಿಳುನಾಡಿನ ಬಗ್ಗೆ ಕಳಕಳಿ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿಯ ಸ್ಥಾಪನಾ ದಿನವಾದ ಏಪ್ರಿಲ್ 6ರಂದೇ ತಮಿಳುನಾಡಿನಲ್ಲಿ ಚುನಾವಣಾ ಆಯೋಗವು ಮತದಾನ ನಿಗದಿ ಮಾಡಿದೆ. ಹಾಗಾಗಿಯೇ ಎನ್ಡಿಎ ಈ ಚುನಾವಣೆಯಲ್ಲಿ ಗೆಲ್ಲಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.