ADVERTISEMENT

ದ್ವೇಷ ಹರಡಿದ ಆರೋಪ: ನೂಪುರ್ ಶರ್ಮಾ, ನವೀನ್ ಜಿಂದಾಲ್, ಒವೈಸಿ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2022, 18:32 IST
Last Updated 9 ಜೂನ್ 2022, 18:32 IST
ನವೀನ್‌ ಜಿಂದಾಲ್‌ ಹಾಗೂ ನೂಪುರ್‌ ಶರ್ಮಾ
ನವೀನ್‌ ಜಿಂದಾಲ್‌ ಹಾಗೂ ನೂಪುರ್‌ ಶರ್ಮಾ   

ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೋಮುಭಾವನೆ ಕೆರಳಿಸಿದ ಆರೋಪದಲ್ಲಿ ಬಿಜೆಪಿ ವಕ್ತಾರೆಯಾಗಿದ್ದ ನೂಪುರ್‌ ಶರ್ಮಾ, ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ನವೀನ್‌ ಕುಮಾರ್‌ ಜಿಂದಾಲ್‌, ಎಐಎಂಐಎಂ ಮುಖ್ಯಸ್ಥ ಅಸಾದುದ್ಧೀನ್‌ ಒವೈಸಿ ಹಾಗೂ ಸಂತ ಯತಿ ನರಸಿಂಗಾನಂದ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಅದರಲ್ಲಿ ಪತ್ರಕರ್ತ ಸಬಾ ನಖ್ವಿ, ಪೀಸ್‌ ಪಾರ್ಟಿಯ ಶಬದ್‌ ಚೌಹಾನ್, ರಾಜಸ್ಥಾನದ ಮೌಲಾನಾ ಮುಫ್ತಿ ನದೀಮ್, ಹಿಂದೂ ಮಹಾಸಭಾದ ಪೂಜಾ ಶಕುನ್‌, ಗುಲ್ಜಾರ್‌ ಅನ್ಸಾರಿ ಹಾಗೂ ಅನಿಲ್‌ ಕುಮಾರ್ ಮೀನಾ ಹೆಸರುಗಳೂ ಸೇರಿವೆ.

‘ಸಾಮಾಜಿಕ ಜಾಲತಾಣಗಳಲ್ಲಿ ಈ ಮುಖಂಡರ ಪೋಸ್ಟ್‌ಗಳನ್ನು ವಿಶ್ಲೇಷಿಸಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅವರ ಹೇಳಿಕೆಗಳು ಶಾಂತಿಗೆ ಧಕ್ಕೆ ತರುವಂತಿವೆ ಹಾಗೂ ಜನರನ್ನು ಪ್ರಚೋದಿಸುವ ರೀತಿಯಲ್ಲಿವೆ’ ಎಂದು ದೆಹಲಿ ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಪ್ರವಾದಿ ಮಹಮ್ಮದ್‌ ಅವರ ವಿರುದ್ಧ ನೂಪುರ್ ಶರ್ಮಾ, ಸುದ್ದಿವಾಹಿನಿಯೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಪ್ರವಾದಿ ವಿರುದ್ಧ ನವೀನ್‌ ಕುಮಾರ್‌ ಜಿಂದಾಲ್‌ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳನ್ನು ಪ್ರಕಟಿಸಿದ್ದರು. ಉಳಿದದವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದರು.

ಸಾಮರಸ್ಯಕ್ಕೆ ಭಂಗ ತರುವ ಹೇಳಿಕೆಗಳನ್ನು ಪ್ರಕಟಿಸಿದ ಖಾತೆಗಳ ಬಗ್ಗೆ ಮಾಹಿತಿ ನೀಡುವಂತೆ ಸಾಮಾಜಿಕ ಜಾಲತಾಣಗಳ ಸಂಘಟನೆಗಳಿಗೆ ದೆಹಲಿ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಪ್ರವಾದಿ ಬಗ್ಗೆ ಹೇಳಿಕೆ ನೀಡಿದ ಕಾರಣಕ್ಕೆ ಜೀವ ಬೆದರಿಕೆ ಕರೆ ಬಂದಿದೆ ಎಂದು ನೂಪುರ್ ಶರ್ಮಾ ಅವರು ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, ಶರ್ಮಾ ಅವರಿಗೆ ಭದ್ರತೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.