ADVERTISEMENT

ಎಂಎಸ್‌ಪಿ ಏಕೆ ಬೇಕು: ರೈತರ ವಿವರಣೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 20:15 IST
Last Updated 24 ನವೆಂಬರ್ 2021, 20:15 IST
ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್   

ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿದ್ದ ರೈತರು ಈಗ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಎಂಎಸ್‌ಪಿ ಏಕೆ ಅಗತ್ಯ ಮತ್ತು ಎಂಎಸ್‌ಪಿಲೆಕ್ಕಾಚಾರಹೇಗಿರಬೇಕುಎಂಬುದನ್ನುವಿವರಿಸುವ ಬರಹವನ್ನು ಸಂಯುಕ್ತ ಕಿಸಾನ್ ಮೋರ್ಚಾ ಬುಧವಾರ ಬಿಡುಗಡೆ ಮಾಡಿದೆ.

ಕೃಷಿ ಕಾಯ್ದೆಗಳನ್ನು ತೆಗೆದುಹಾಕಲು, ಮಸೂದೆ ಮಂಡಿಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದ ದಿನವೇ ಕಿಸಾನ್ ಸಂಯುಕ್ತ ಮೋರ್ಚಾ ಎಂಎಸ್‌ಪಿಯ ಅಗತ್ಯವನ್ನು ಪ್ರತಿಪಾದಿಸಿದೆ.

‘ಈ ಪ್ರತಿಭಟನೆ ಕೊನೆಯಾಗಿಲ್ಲ. ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲು ನಾವು ಇದೇ 27ಕ್ಕೆ ಸಭೆ ನಡೆಸಲಿದ್ದೇವೆ’ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ನಾಯಕ ರಾಕೇಶ್ ಟಿಕಾಯತ್ ಬುಧವಾರ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು (ಸಿಎಸಿಪಿ)ಎಲ್ಲಾ ಬೆಳೆಗಳಿಗೆ ರೈತ ಮಾಡಿದ ವೆಚ್ಚ ಮತ್ತು ಕುಟುಂಬದ ಸದಸ್ಯರ ದುಡಿಮೆಯನ್ನು ಸೇರಿಸಿ ಎಂಎಸ್‌ಪಿ ನಿಗದಿ ಮಾಡುತ್ತದೆ. ಆದರೆ ಸ್ವಾಮಿನಾಥನ್ ಆಯೋಗದ ವರದಿಯಲ್ಲಿ ಶಿಫಾರಸು ಮಾಡಲಾದ ಎಂಎಸ್‌ಪಿಯು ರೈತ ಮಾಡಿದ ವೆಚ್ಚ, ಕುಟುಂಬದ ಸದಸ್ಯರ ದುಡಿಮೆ, ಜಮೀನು ಮತ್ತು ಬಂಡವಾಳ ಹೂಡಿಕೆ ಮೇಲಿನ ಗಳಿಕೆಯನ್ನು ಒಳಗೊಂಡಿದೆ. ಸಿಎಸಿಪಿ ನಿಗದಿ ಮಾಡುವ ಎಂಎಸ್‌ಪಿಯು, ಸ್ವಾಮಿನಾಥನ್ ಆಯೋಗದಲ್ಲಿ ವಿವರಿಸಲಾದ ಎಂಎಸ್‌ಪಿಗಿಂತ ಕಡಿಮೆ’ ಎಂದು ಸಂಯುಕ್ತಕಿಸಾನ್ ಮೋರ್ಚಾ (ಎಸ್‌ಕೆಎಂ) ವಿವರಿಸಿದೆ.

‘ಬೇರೆ–ಬೇರೆ ರಾಜ್ಯಗಳು ಎಂಎಸ್‌ಪಿಯನ್ನು ಬೇರೆ–ಬೇರೆ ರೀತಿಯಲ್ಲಿ ಲೆಕ್ಕಹಾಕುತ್ತವೆ. ಹೀಗಾಗಿ ಒಂದೇ ಬೆಳೆಗೆ ಹಲವು ರಾಜ್ಯಗಳಲ್ಲಿ ಭಿನ್ನ ಎಂಎಸ್‌ಪಿ ಇದೆ.ಈ ಕಾರಣದಿಂದಲೇ ರೈತರು ಸರಿಯಾದ ಎಂಎಸ್‌ಪಿ ಇರಬೇಕು ಎಂದು ಒತ್ತಾಯಿಸುತ್ತಿದ್ದಾರೆ’ ಎಂದು ಎಸ್‌ಕೆಎಂ ಹೇಳಿದೆ.

‘ಕೃಷಿ ಕಾಯ್ದೆಗಳಿಂದಬರಬಹುದಾಗಿದ್ದ ಸಮಸ್ಯೆಗಳುಮಾತ್ರ ಈಗ ಬಗೆಹರಿದಿವೆ. ಆದರೆ ಕಡಿಮೆ ಬೆಲೆ, ಬೆಳೆನಾಶ, ಅತೀವ ಸಾಲದ ಸಮಸ್ಯೆಗಳು ಹಾಗೇ ಇವೆ. ಎಂಎಸ್‌ಪಿಯಲ್ಲಿ ಸರ್ಕಾರವು ಕೃಷಿ ಉತ್ಪನ್ನಗಳನ್ನು ಖರೀದಿಸುತ್ತದೆ ಎಂಬ ಖಾತರಿ ಸಹ ಇಲ್ಲ. ಈ ಸಮಸ್ಯೆಗಳು ಬಗೆಹರಿಯಬೇಕು ಎಂದರೆ ಸರ್ಕಾರವು ಸರಿಯಾದ ರೀತಿಯಲ್ಲಿ ಎಂಎಸ್‌ಪಿ ನೀಡಬೇಕು’ ಎಂದು ಎಸ್‌ಕೆಎಂ ಪ್ರತಿಪಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.