ADVERTISEMENT

ಕೊಲೆ ಮೂಲಕ ಪ್ರತಿಭಟನಕಾರರನ್ನು ಮೌನವಾಗಿಸಲು ಸಾಧ್ಯವಿಲ್ಲ: ವರುಣ್‌ ಗಾಂಧಿ

ಲಖಿಂಪುರ ಘಟನೆಯ 37 ಸೆಕೆಂಡ್‌ಗಳ ವಿಡಿಯೊ ಸಹಿತ ಮಾಹಿತಿ ಟ್ವೀಟ್ ಮಾಡಿದ ಸಂಸದ

ಪಿಟಿಐ
Published 7 ಅಕ್ಟೋಬರ್ 2021, 6:29 IST
Last Updated 7 ಅಕ್ಟೋಬರ್ 2021, 6:29 IST
ವರುಣ್‌ ಗಾಂಧಿ
ವರುಣ್‌ ಗಾಂಧಿ   

ಲಖನೌ: ಲಖಿಂಪುರ–ಖೇರಿಯಲ್ಲಿ ನಡೆದ ಹಿಂಸಾಚಾರದ ವಿಡಿಯೊ ತುಣಕನ್ನು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ‘ಪ್ರತಿಭಟನಾನಿರತ ರೈತರನ್ನು ಕೊಲೆಯ ಮೂಲಕ ಸುಮ್ಮನಾಗಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಪಿಲಿಭಿತ್ ಸಂಸದ ವರುಣ್ ಗಾಂಧಿ, ‘ವಿಡಿಯೊದಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಕೊಲೆ ಮೂಲಕ ಪ್ರತಿಭಟನಕಾರರನ್ನು ಮೌನವಾಗಿಸಲು ಸಾಧ್ಯವಿಲ್ಲ. ಅಮಾಯಕ ರೈತರು ಚೆಲ್ಲಿದ ರಕ್ತಕ್ಕೆ ಯಾರು ಉತ್ತರದಾಯಿಗಳು ಎಂಬುದು ಗೊತ್ತಾಗಬೇಕು. ರೈತರ ಮನದಲ್ಲಿ ಕ್ರೌರ್ಯ ಹೊಕ್ಕುವ ಮೊದಲು ಅವರಿಗೆ ನ್ಯಾಯ ಒದಗಿಸಬೇಕು‘ ಎಂದು ಪೋಸ್ಟ್ ಮಾಡಿದ್ದಾರೆ.

ವರುಣ್ ಅವರು, ತಮ್ಮ ಟ್ವಿಟರ್‌ನಲ್ಲಿ ಮಾಹಿತಿಯ ಜೊತೆಗೆ 37 ಸೆಕೆಂಡ್‌ಗಳ ವಿಡಿಯೊ ತುಣಕನ್ನು ಲಗತ್ತಿಸಿದ್ದಾರೆ. ಆ ವಿಡಿಯೊದಲ್ಲಿ ವೇಗವಾಗಿ ಬಂದ ಮಹೀಂದ್ರ ಥಾರ್ ಜೀಪ್‌ ಜನರ ಮೇಲೆ ಹರಿಯುತ್ತಿರುವ ದೃಶ್ಯವಿದೆ. ಒಂದು ಕಪ್ಪು ಮತ್ತು ಇನ್ನೊಂದು ಬಿಳಿ ಬಣ್ಣಗಳ ಎರಡು ಎಸ್‌ಯುವಿಗಳು ಜೀಪನ್ನು ಹಿಂಬಾಲಿಸುತ್ತಿರುವುದು ಕಾಣುತ್ತದೆ. ಜನರು ಕೂಗುವ ಮತ್ತು ಅಳುವ ಗದ್ದಲವೂ ಕೇಳಿಸುತ್ತದೆ.

ADVERTISEMENT

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವನ್ನು ಅಕ್ಟೋಬರ್ 3ರಂದು ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ನಡೆದಾಗ ತೆಗೆಯಲಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.