ADVERTISEMENT

ಗಾಯಾಳು ಸೈನಿಕರ ಜೀವರಕ್ಷಣೆಗೆ ಡಿಆರ್‌ಡಿಒದಿಂದ ಔಷಧ ಅಭಿವೃದ್ಧಿ

ಪಿಟಿಐ
Published 11 ಮಾರ್ಚ್ 2019, 19:50 IST
Last Updated 11 ಮಾರ್ಚ್ 2019, 19:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕದನಭೂಮಿಯಲ್ಲಿ ಗಂಭೀರವಾಗಿ ಗಾಯಗೊಳ್ಳುವ ಶೇ 90ರಷ್ಟು ಯೋಧರು ಕೆಲವೇ ತಾಸುಗಳಲ್ಲಿ ಮೃತಪಡುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳನ್ನು ರಕ್ಷಿಸಲುಡಿಆರ್‌ಡಿಒದ ವೈದ್ಯಕೀಯ ಪ್ರಯೋಗಾಲಯ ‘ಪರಿಣಾಮಕಾರಿ ಪ್ರಾಥಮಿಕ ಔಷಧಿ’ಗಳನ್ನು ಅಭಿವೃದ್ಧಿಪಡಿಸಿದೆ.

ಅರಣ್ಯ ಪ್ರದೇಶ, ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಹಾಗೂ ಭಯೋತ್ಪಾದಕ ದಾಳಿಗಳಲ್ಲಿ ಗಾಯಗೊಳ್ಳುವಸೈನಿಕರನ್ನುಆಸ್ಪತ್ರೆಗೆ ಸಾಗಿಸಲು ಅಡೆತಡೆಗಳು ಇರುತ್ತವೆ. ಆದರೆ ಈ ಅವಧಿ ಅವರ ಜೀವ ಉಳಿಸುವಲ್ಲಿ ನಿರ್ಣಾಯಕವಾಗಿರುತ್ತದೆ. ಆದ್ದರಿಂದ ‘ಅತ್ಯಮೂಲ್ಯ ಸಮಯ’ದಲ್ಲಿರಕ್ತಸ್ರಾವ ತಡೆಗಟ್ಟುವ, ಗಾಳಿ, ನೀರುತಾಗದಂತೆ ಗಾಯಕ್ಕೆ ಬಿಗಿಯಾಗಿ ಪಟ್ಟಿ ಕಟ್ಟುವ ಮತ್ತು ಗ್ಲಿಸರಿನ್ ಬೆರೆಸಿದ ಸಲೈನ್ (ಲವಣಯುಕ್ತ ದ್ರಾವಣ) ಸೇರಿದಂತೆಔಷಧ ಪರಿಕರಗಳನ್ನು ಸಿದ್ಧಪಡಿಸಲಾಗಿದೆ.

ಈಚೆಗೆ ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್‌ ಸಿಬ್ಬಂದಿ ಮೃತಪಟ್ಟಿದ್ದನ್ನು ಉಲ್ಲೇಖಿಸಿದಡಿಆರ್‌ಡಿಒದ ಅಣು ವೈದ್ಯಕೀಯ ಮತ್ತು ಸಂಬಂಧಿತ ವಿಜ್ಞಾನಗಳ ಸಂಸ್ಥೆ (ಐಎನ್‍ಎಂಎಎಸ್) ವಿಜ್ಞಾನಿಗಳು, ‘ಪರಿಣಾಮಕಾರಿ ಪ್ರಾಥಮಿಕ ಚಿಕಿತ್ಸೆ ದೊರಕಿದಲ್ಲಿ ಅಂಗವೈಕಲ್ಯ ಪ್ರಮಾಣ ತಗ್ಗಿಸುವ ಹಾಗೂ ಜೀವ ಉಳಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸಾವಿನ ಸಂಖ್ಯೆ ತಗ್ಗಿಸಬಹುದು’ ಎಂದು ಹೇಳಿದ್ದಾರೆ.

ADVERTISEMENT

‘ಗ್ಲಿಸರಿನ್ ಬೆರೆಸಿದ ಸಲೈನ್‌ ಜೀವರಕ್ಷಕ’
‘ಸಾಮಾನ್ಯ ಸಲೈನ್‌ಗಿಂತ ಗ್ಲಿಸರಿನ್ ಬೆರೆಸಿದ ಸಲೈನ್‌ಗೆ ಜೀವರಕ್ಷಿಸುವ ಸಾಮರ್ಥ್ಯ ಹೆಚ್ಚಿದ್ದು, ಇದನ್ನು ಬಳಸುವುದರಿಂದ ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಲು ಕೊಂಚ ಹೆಚ್ಚಿನ ಕಾಲಾವಕಾಶ ದೊರಕುತ್ತದೆ. ನಾವು ಅಭಿವೃದ್ಧಿಪಡಿಸಿರುವ ವಿಶೇಷ ಔಷಧ ಪಟ್ಟಿ, ಸಾಮಾನ್ಯಕ್ಕಿಂತ 200 ಪಟ್ಟು ಹೆಚ್ಚು ಸಮರ್ಥವಾಗಿ ರಕ್ತಸ್ರಾವ ತಡೆಗಟ್ಟುತ್ತದೆ’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

*
ಡಿಆರ್‌ಡಿಒ ದೇಶೀಯವಾಗಿ ಅಭಿವೃದ್ಧಿಪಡಿಸಿರುವಈ ಔಷಧ ಪರಿಕರಗಳು ತುರ್ತುವೇಳೆಯಲ್ಲಿ ಅರೆಸೇನಾಪಡೆ, ಸೇನೆಯ ಯೋಧರಿಗೆ ವರದಾನವಾಗಲಿವೆ
-ಎ.ಕೆ. ಸಿಂಗ್,ಡಿಆರ್‌ಡಿಒ ಜೀವವಿಜ್ಞಾನ ವಿಭಾಗದ ಪ್ರಧಾನ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.