ಅಂಜಲಿ ಜಾಧವ್
ಚಿತ್ರ: ಎಕ್ಸ್
ಪುಣೆ: ಅಕ್ರಮ ಸಂಬಂಧವನ್ನು ಮುಚ್ಚಿಡಲು ಹೆಂಡತಿಯನ್ನು ಕೊಂದು ಕಬ್ಬಿಣದ ಕುಲುಮೆಯಲ್ಲಿ ಸುಟ್ಟು ಅಮಾಯಕನಂತೆ ನಟಿಸಿದ್ದ ಗಂಡನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಪುಣೆಯ ಶಿವಾನೆ ಪ್ರದೇಶದ ನಿವಾಸಿ ಸಮೀರ್ ಜಾಧವ್ ಬಂಧಿತ ಆರೋಪಿ. ಹತ್ಯೆಯಾದ ಅಂಜಲಿ ಜಾಧವ್, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಗ್ಯಾರೇಜ್ ನಡೆಸುತ್ತಿದ್ದ ಸಮೀರ್, ಹಿಂದಿಯ ದೃಶ್ಯಂ ಸಿನಿಮಾ ನೋಡಿ ಹತ್ಯೆಯ ಯೋಜನೆ ರೂಪಿಸಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.
ಮಕ್ಕಳು ಊರಿಗೆ ಹೋಗುವ ಸಂದರ್ಭವನ್ನೇ ಎದುರು ನೋಡುತ್ತಿದ್ದ ಆರೋಪಿ ಸಮೀರ್, ಅಕ್ಟೋಬರ್ 26ರಂದು ಪತ್ನಿಯನ್ನು ತಾನು ಬಾಡಿಗೆಗೆ ಪಡೆದಿದ್ದ ಗೋದಾಮಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆಯನ್ನು ಉಸಿರುಗಟ್ಟಿ ಸಾಯಿಸಿದ್ದಾನೆ. ಯೋಜನೆಯಂತೆ ಕಬ್ಬಿಣದ ಕುಲುಮೆಯನ್ನು ಮೊದಲೇ ನಿರ್ಮಿಸಿದ್ದ ಆತ, ಅದರಲ್ಲಿ ಅಂಜಲಿ ಶವವನ್ನು ಇಟ್ಟು ಸುಟ್ಟು ಹಾಕಿದ್ದಾನೆ. ನಂತರ ಚಿತಾಭಸ್ಮವನ್ನು ಹತ್ತಿರದ ನದಿಗೆ ಎಸೆದಿದ್ದಾನೆ.
ಮೊದಲಿಗೆ ಹೆಂಡತಿಯ ಅಕ್ರಮ ಸಂಬಂಧದಿಂದ ನೊಂದು ಆಕೆಯನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಅನುಮಾನಿಸಿದ್ದರು. ಆದರೆ, ತನಿಖೆಯಲ್ಲಿ ಆರೋಪಿಯೇ(ಸಮೀರ್) ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು ಎಂದು ತಿಳಿದುಬಂದಿದೆ.
ಅಲ್ಲದೇ, ಹೆಂಡತಿಯ ಮೇಲೆ ಅನುಮಾನ ಮೂಡಿಸುವ ಉದ್ದೇಶದಿಂದ ಆಕೆಯ ಮೊಬೈಲ್ ಮೂಲಕ ತನ್ನ ಸ್ನೇಹಿತನಿಗೆ ‘ಐ ಲವ್ ಯು’ ಎಂದು ಸಂದೇಶ ಕಳುಹಿಸುತ್ತಿದ್ದ ಆರೋಪಿ, ಅಲ್ಲಿಂದ ಬರುವ ಪ್ರತಿಕ್ರಿಯೆಗೆ ತಾನೇ ಉತ್ತರ ನೀಡಿರುವುದು ತನಿಖೆ ವೇಳೆ ಬಯಲಾಗಿದೆ.
ಹತ್ಯೆಯ ನಂತರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಸಮೀರ್, ನಾಪತ್ತೆ ಪ್ರಕರಣ ದಾಖಲಿಸಿದ್ದನು. ತನಿಖೆಯನ್ನು ದಾರಿ ತಪ್ಪಿಸಲು ಯತ್ನಿಸಿದ್ದನು. ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.