ADVERTISEMENT

ಸೆ.27ರಂದು ಪಂಜಾಬ್ ವಿಧಾನಸಭೆ ಅಧಿವೇಶನ: ಸಿಎಂ ಭಗವಂತ ಮಾನ್

ಪಿಟಿಐ
Published 22 ಸೆಪ್ಟೆಂಬರ್ 2022, 9:56 IST
Last Updated 22 ಸೆಪ್ಟೆಂಬರ್ 2022, 9:56 IST
ಭಗವಂತ ಮಾನ್
ಭಗವಂತ ಮಾನ್   

ಚಂಡೀಗಢ: ಸೆಪ್ಟೆಂಬರ್ 27ರಂದು ಪಂಜಾಬ್ ವಿಧಾನಸಭೆ ಅಧಿವೇಶನವನ್ನು ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಭಗವಂತ ಮಾನ್ ಗುರುವಾರ ಹೇಳಿದ್ದಾರೆ.

ವಿಶ್ವಾಸಮತ ಸಾಬೀತುಪಡಿಸಲು ಪಂಜಾಬ್‌ನ ಆಡಳಿತರೂಢ ಎಎಪಿ ಸರ್ಕಾರವು ಕರೆದಿದ್ದ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಬುಧವಾರ ಅನುಮತಿ ನಿರಾಕರಿಸಿದ್ದರು.

ಇದರ ಬೆನ್ನಲ್ಲೇ ಪಂಜಾಬ್ ಸಿಎಂ ಭಗವಂತ ಮಾನ್, ವಿವಿಧ ವಿಷಯಗಳ ಕುರಿತು ಚರ್ಚಿಸಲು ವಿಧಾನಸಭಾ ಅಧಿವೇಶನ ಕರೆಯಲು ನಿರ್ಧರಿಸಿದ್ದಾರೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸೆಪ್ಟೆಂಬರ್ 27ರಂದು ವಿಧಾನಸಭಾ ಅಧಿವೇಶನ ಕರೆಯಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಭಗವಂತ ಮಾನ್ ಹೇಳಿದ್ದಾರೆ.

ಅಧಿವೇಶನದಲ್ಲಿ ವಿದ್ಯುತ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ಅದೇ ಹೊತ್ತಿಗೆ ವಿಶೇಷ ಅಧಿವೇಶನ ಕರೆಯುವ ಆದೇಶವನ್ನು ರಾಜ್ಯಪಾಲರು ರದ್ದುಗೊಳಿಸಿರುವ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದಾಗಿ ಅವರು ಸ್ಪಷ್ಟಪಡಿಸಿದರು.

ಈ ಮೊದಲು ಆಪರೇಷನ್ ಕಮಲದ ಮೂಲಕ ಬಿಜೆಪಿಯು ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದ ಭಗವಂತ ಮಾನ್, ಎಎಪಿ ಶಾಸಕರಿಗೆ ₹25ಕೋಟಿ ಆಮಿಷವೊಡ್ಡಲಾಗಿದೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.