ADVERTISEMENT

ಪಂಜಾಬ್‌ ವಿಧಾನಸಭೆಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ

ನಾಲ್ಕು ಮಸೂದೆಗಳಿಗೆ ಸರ್ವಾನುಮತದಿಂದ ಅನುಮೋದನೆ

ಪಿಟಿಐ
Published 20 ಅಕ್ಟೋಬರ್ 2020, 11:57 IST
Last Updated 20 ಅಕ್ಟೋಬರ್ 2020, 11:57 IST
ಅಮರಿಂದರ್ ಸಿಂಗ್‌
ಅಮರಿಂದರ್ ಸಿಂಗ್‌   

ಚಂಡೀಗಡ: ಪಂಜಾಬ್‌ ವಿಧಾನಸಭೆಯಲ್ಲಿ ಮಂಗಳವಾರ ನಾಲ್ಕು ಮಸೂದೆಗಳನ್ನು ಸರ್ವಾನುಮತದಿಂದ ಅಂಗೀಕರಿಸುವ ಜತೆಗೆ, ಕೇಂದ್ರ ಸರ್ಕಾರ ಅಂಗೀಕರಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಕೈಗೊಳ್ಳಲಾಯಿತು.

ವಿಧಾನಸಭೆಯಲ್ಲಿ ಐದು ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ಮಸೂದೆಗಳನ್ನು ಅಂಗೀಕರಿಸಲಾಯಿತು. ಈ ವೇಳೆ ಬಿಜೆಪಿ ಶಾಸಕರು ಕಲಾಪದಲ್ಲಿ ಭಾಗವಹಿಸಿರಲಿಲ್ಲ. ಪ್ರಸ್ತುತ ವಿಧಾನಸಭೆಯಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದಾರೆ.

ಮಸೂದೆಗಳ ಅಂಗೀಕಾರ ಮತ್ತು ಕೃಷಿ ಮಸೂದೆಗಳ ವಿರುದ್ಧ ನಿರ್ಣಯವನ್ನು ವಿರೋಧಪಕ್ಷಗಳಾದ ಎಸ್‌ಎಡಿ, ಎಎಪಿ ಮತ್ತು ಲೋಕ್‌ಇನ್ಸಾಫ್‌ನ ಶಾಸಕರು ಬೆಂಬಲಿಸಿದರು.

ADVERTISEMENT

ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಗೆ ಗೋಧಿ ಅಥವಾ ಭತ್ತವನ್ನು ಖರೀದಿ ಅಥವಾ ಮಾರಾಟ ಮಾಡಿದರೆ, ಅಂಥವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಎರಡೂವರೆ ಎಕರೆ ಒಳಗೆ ಜಮೀನು ಹೊಂದಿರುವ ರೈತರಿಗೆ ಈ ನಿಬಂಧನೆಯಿಂದ ವಿನಾಯಿತಿ ನೀಡಲಾಗಿದೆ. ಕಾಳಸಂತೆಯಲ್ಲಿ ಧಾನ್ಯಗಳನ್ನು ಮಾರಾಟ ಮಾಡುವುದನ್ನು ತಪ್ಪಿಸುವುದಕ್ಕಾಗಿ ಈ ಕಠಿಣ ನಿಯಮವನ್ನು ಜಾರಿಗೆ ತರಲಾಗಿದೆ.

ಮಸೂದೆಗಳ ಅಂಗೀಕಾರಕ್ಕೆ ಮುನ್ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಸರ್ವಪಕ್ಷಗಳ ಸಭೆ ನಡೆಸಿದರು. ಮಸೂದೆಗಳ ಅಂಗೀಕಾರ ಮತ್ತು ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಕೈಗೊಳ್ಳುವ ಮುನ್ನ ಮುಖ್ಯಮಂತ್ರಿಯವರು ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.