ಚಂಡೀಗಢ: ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಮಜ್ರಾ ಅವರ ಒತ್ತಾಯದ ಮೇರೆಗೆ ಆಸ್ಪತ್ರೆಯ ಕೊಳಕು ಹಾಸಿಗೆಯ ಮೇಲೆ ಮಲಗಿ, ಅಪಮಾನಕ್ಕೀಡಾದ ‘ಬಾಬಾ ಫರೀದ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ’ದ ಕುಲಪತಿ ಡಾ ರಾಜ್ ಬಹದ್ದೂರ್ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಪತ್ರವನ್ನು ಅವರು ಮುಖ್ಯಮಂತ್ರಿಗೆ ಭಗವಂತ ಸಿಂಗ್ ಮಾನ್ ಅವರಿಗೆ ನೀಡಿದ್ದು, ಅವರು ಅದನ್ನು ಅಂಗೀಕರಿಸಿದ್ದಾರೆ. ರಾಜೀನಾಮೆ ಪತ್ರವನ್ನು ಸಿಎಂ ಮಾನ್ ಅವರು ರಾಜ್ಯಪಾಲರಿಗೆ ರವಾನಿಸಿದ್ದಾರೆ.
ವಿಶ್ವವಿದ್ಯಾಲಯದ ಪರಿಶೀಲನೆಯ ವೇಳೆ ಕುಲಪತಿ ರಾಜ್ ಬಹುದ್ದೂರ್ ಅವರನ್ನು ಆರೋಗ್ಯ ಸಚಿವ ಚೇತನ್ ಸಿಂಗ್ ಅವರು ಕೊಳಕು ಹಾಸಿಗೆ ಮೇಲೆ ಬಲವಂತವಾಗಿ ಮಲಗಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿತ್ತು. ಹೀಗಾಗಿ ಕುಲಪತಿ ಮುಜುಗರಕ್ಕೆ ಒಳಗಾಗಿದ್ದರು.
ಸದ್ಯ ರಾಜ್ ಬಹುದ್ದೂರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ರಾಜ್ಯ ಸರ್ಕಾರವು ಮಾಧ್ಯಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ಪ್ರಭಾರಿಯನ್ನಾಗಿ ನಿಯೋಜಿಸಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಜೌರಮಜ್ರಾ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಫರೀದ್ಕೋಟ್ನ ಗುರು ಗೋಬಿಂದ್ ಸಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಸಚಿವ ಚೇತನ್ ಸಿಂಗ್ ಕಳೆದ ತಿಂಗಳು ಪರಿಶೀಲನೆ ನಡೆಸಿದ್ದರು. ಈ ವೇಳೆ ಕುಲಪತಿ ಮುಜುಗರಕ್ಕೆ ಒಳಗಾಗಿದ್ದರು.
ಘಟನೆಯ ನಂತರ, ಡಾ.ಬಹದ್ದೂರ್ ಅವರು ತಮಗಾದ ಅಪಮಾನವನ್ನು ಪಂಜಾಬ್ ಮುಖ್ಯಮಂತ್ರಿಗೆ ತಿಳಿಸಿದ್ದರು. ಕೆಲಸ ಮಾಡಲು ತಮ್ಮಿಂದ ಆಗುತ್ತಿಲ್ಲ ಎಂದಿದ್ದ ಅವರು, ತಮ್ಮನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.
ಕುಲಪತಿ ಡಾ. ಬಹದ್ದೂರ್ ಅವರನ್ನು ಸಚಿವರು ನಡೆಸಿಕೊಂಡ ರೀತಿಯ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿತ್ತು. ಭಾರತೀಯ ವೈದ್ಯಕೀಯ ಸಂಘ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳು ಆರೋಗ್ಯ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಅವರ ವರ್ತನೆಯನ್ನು ಟೀಕಿಸಿದ್ದವು. ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದವು.
ಇವುಗಳನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.