ADVERTISEMENT

ಪಂಜಾಬ್‌: ಪಾಕ್‌ ವಶದಲ್ಲಿರುವ ರೈತನ ಕರೆತರಲು ಒತ್ತಾಯ

ಪಿಟಿಐ
Published 5 ಜುಲೈ 2025, 14:25 IST
Last Updated 5 ಜುಲೈ 2025, 14:25 IST
   

ಚಂಡೀಗಢ: ಆಕಸ್ಮಿಕವಾಗಿ ಪಾಕಿಸ್ತಾನ ಗಡಿಯೊಳಗೆ ಪ್ರವೇಶಿಸಿರುವ ಪಂಜಾಬ್‌ನ ಫಿರೋಜ್‌ಪುರದ ರೈತನನ್ನು ಸುರಕ್ಷಿತವಾಗಿ ಕರೆತರುವಂತೆ ಆತನ ಕುಟುಂಬಸ್ಥರು ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.

ಪಾಕಿಸ್ತಾನ ಗಡಿಯಲ್ಲಿರುವ ತಮ್ಮ ಜಮೀನಿಗೆ ಅಮೃತ್‌ಪಾಲ್‌ ಸಿಂಗ್‌ ಅವರು ಜೂನ್‌ 21ರಂದು ಕೃಷಿ ಕೆಲಸಕ್ಕೆಂದು ಹೋಗಿದ್ದರು. ಗಡಿಭಾಗದಿಂದ ಸಂಜೆ 5 ಗಂಟೆಯೊಳಗೆ ವಾಪಾಸ್‌ ಬರಲು ಅವರಿಗೆ ಸಾಧ್ಯವಾಗಿರಲಿಲ್ಲ.

ಪಾಕಿಸ್ತಾನದ ಕಡೆಗಿರುವ ಮಾನವ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ್ದ ಗಡಿ ಭದ್ರತಾ ಪಡೆಯು ( ಬಿಎಸ್‌ಎಫ್) ಈ ಬಗ್ಗೆ ಪಾಕಿಸ್ತಾನಿ ರೇಂಜರ್‌ಗಳೊಂದಿಗೆ ಮೂರರಿಂದ ನಾಲ್ಕು ಸಭೆಗಳನ್ನು ನಡೆಸಿತ್ತು. ಭಾರತೀಯನನ್ನು ವಶಕ್ಕೆ ಪಡೆದಿರುವುದನ್ನು ಆರಂಭದಲ್ಲಿ ಪಾಕಿಸ್ತಾನ ಒಪ್ಪಿಕೊಂಡಿರಲಿಲ್ಲ. ಅಮೃತ್‌ಪಾಲ್ ಸ್ಥಳೀಯ ಪೊಲೀಸರ ವಶದಲ್ಲಿರುವ ಬಗ್ಗೆ ಜೂನ್‌ 27ರಂದು ಪಾಕಿಸ್ತಾನ ದೃಢಪಡಿಸಿತ್ತು.

ADVERTISEMENT

ಅಂತರರಾಷ್ಟ್ರೀಯ ಗಡಿ ಮತ್ತು ಮುಳ್ಳುತಂತಿಯ ಬೇಲಿಗಳ ನಡುವಿನ ಕೃಷಿ ಜಮೀನಿಗೆ ತೆರಳಲು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಮಾತ್ರ ರೈತರಿಗೆ ಅವಕಾಶ ನೀಡಲಾಗುತ್ತದೆ. ಈ ಬಗ್ಗೆ ಬಿಎಸ್‌ಎಫ್ ನಿಗಾವಹಿಸಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.