ಅಮೃತಸರ: ‘ಆಪರೇಷನ್ ಸಿಂಧೂರ’ ಬಳಿಕ ಪಂಜಾಬ್ನ ಗಡಿಯ ಮೂರೂ ಚೆಕ್ಪೋಸ್ಟ್ಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಗಡಿ ಭದ್ರತಾ ಪಡೆಯ ರಿಟ್ರೀಟ್ (ಕವಾಯತು) ಸಮಾರಂಭ ಬುಧವಾರದಿಂದ ಆರಂಭವಾಗಲಿದೆ ಎಂದು ಬಿಎಸ್ಎಫ್ ಹೇಳಿದೆ.
ಅಮೃತಸರದ ಅಟ್ಟಾರಿ– ಪಾಕಿಸ್ತಾನದ ವಾಘ ಗಡಿ, ಫಿರೋಜ್ಪುರದ ಹುಸೇನಿವಾಲಾ ಮತ್ತು ಫಾಜಿಲ್ಕಾ ಜಿಲ್ಲೆಯ ಸಾದ್ಕಿಯಲ್ಲಿನ ಜಂಟಿ ಚೆಕ್ ಪೋಸ್ಟ್ಗಳಲ್ಲಿ ಧ್ವಜ ಇಳಿಸುವ ಕಾರ್ಯಕ್ರಮವೇ ರಿಟ್ರೀಟ್ ಆಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದಾಗಿ ಮೇ 9 ರಂದು ಸಂಜೆ 6 ರಿಂದ ಇದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಸಂಜೆ 6 ಗಂಟೆಗೆ ಇದು ಪುನರಾರಂಭವಾಗಲಿದೆ. ಬುಧವಾರದಿಂದ ಸಾರ್ವಜನಿಕರ ವೀಕ್ಷಣೆಗೂ ಮುಕ್ತವಾಗಲಿದೆ.
ಮಂಗಳವಾರವೇ ಈ ಸಮಾರಂಭವನ್ನು ಪುನರಾರಂಭಿಸಲಾಯಿತು. ಆದರೆ, ಇದನ್ನು ವೀಕ್ಷಿಸಲು ಪತ್ರಕರ್ತರಿಗೆ ಮಾತ್ರ ಅವಕಾಶವಿತ್ತು. ಬುಧವಾರದಿಂದ ಸಾರ್ವಜನಿಕರು ಭಾಗವಹಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದಾಗ್ಯೂ, ಬಿಎಸ್ಎಫ್ ಪಡೆಗಳು ಪಾಕಿಸ್ತಾನದ ರೇಂಜರ್ಗಳೊಂದಿಗೆ ಹಸ್ತಲಾಘವ ನೀಡುವುದಿಲ್ಲ ಮತ್ತು ಈ ಹಿಂದೆ ಘೋಷಿಸಿದಂತೆ ಧ್ವಜವನ್ನು ಕೆಳಕ್ಕೆ ಇಳಿಸುವ ಪ್ರಕ್ರಿಯೆ ವೇಳೆ ಗಡಿಯ ಗೇಟು ತೆರೆಯುವುದಿಲ್ಲ. ಹಾಗಾಗಿ, ಸಮಾರಂಭದ ಅವಧಿ ತಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ದಿನ ಸಂಜೆ ಈ ಮೂರು ಸ್ಥಳಗಳಲ್ಲಿ ಧ್ವಜವನ್ನು ಇಳಿಸುವ ಪ್ರಕ್ರಿಯೆಯನ್ನು ಬಿಎಸ್ಎಫ್ ತುಕಡಿಗಳು ನಡೆಸುತ್ತಿದ್ದವು. ಸಾರ್ವಜನಿಕರ ಸುರಕ್ಷೆತೆ ದೃಷ್ಟಿಯಿಂದ ಮೇ 8ರಿಂದ ಇದರ ವೀಕ್ಷಣೆಗೆ ಪ್ರವೇಶ ನಿರ್ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ರಿಟ್ರೀಟ್ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಶಿಸ್ತು ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಬಿಂಬಿಸಲಾಗುತ್ತದೆ. ಗೊತ್ತುಪಡಿಸಿದ ಗಡಿಯಲ್ಲಿ ಬಿಎಸ್ಎಫ್ ಮತ್ತು ಪಾಕಿಸ್ತಾನದ ಸೇನೆ ಮುಖಾಮುಖಿಯಾಗಿ ಈ ಕವಾಯತು ನಡೆಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.