
ಚಂಡೀಗಢ: ಪಂಜಾಬ್ನ ತರನ್ ತಾರನ್ನಲ್ಲಿ ತನ್ನ ಸಹಪಾಠಿಯನ್ನು ಗುಂಡಿಕ್ಕಿ ಕೊಂದು ತಾನು ಗುಂಡು ಹಾರಿಸಿಕೊಂಡಿದ್ದ ಕಾನೂನು ವಿದ್ಯಾರ್ಥಿ ಮೃತಪಟ್ಟಿದ್ದಾರೆ.
‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಿನ್ಸ್ ರಾಜ್(20) ಬುಧವಾರ ರಾತ್ರಿ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಿನ್ಸ್ ರಾಜ್, ಸಂದೀಪ್ ಕೌರ್(19) ಮತ್ತು ಮತ್ತೊಬ್ಬ ವಿದ್ಯಾರ್ಥಿನಿ ಸೋಮವಾರ ಕಾಲೇಜಿನ ಕೊಠಡಿಯಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ತನ್ನ ಚೀಲದಿಂದ ಪಿಸ್ತೂಲನ್ನು ತೆಗೆದು ಪ್ರಿನ್ಸ್, ಸಹಪಾಠಿ ಕೌರ್ ಮೇಲೆ ಗುಂಡು ಹಾರಿಸಿದ್ದ. ಬಳಿಕ ತನ್ನ ತಲೆಗೆ ಗುಂಡು ಹೊಡೆದುಕೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಿನ್ಸ್ ರಾಜ್ ಮತ್ತು ಸಂದೀಪ್ ಕೌರ್ ಅವರು ಮೈ ಭಾಗೊ ಕಾನೂನು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು.
ಕೆಲ ದಿನಗಳಿಂದ ಸಂದೀಪ್ಗೆ ಪ್ರಿನ್ಸ್ ಕಿರುಕುಳ ನೀಡುತ್ತಿದ್ದ. ಮನೆಯವರೆಗೆ ಹಿಂಬಾಲಿಸಿಕೊಂಡು ಬರುತ್ತಿದ್ದ. ಸಂದೀಪ್ ಕೌರ್ಗೆ ಬೇರೊಬ್ಬರ ಜೊತೆ ವಿವಾಹ ನಿಶ್ಚಿತಾರ್ಥವಾಗಿತ್ತು ಎಂದು ಸಂದೀಪ್ ಕೌರ್ ಕುಟುಂಬಸ್ಥರೊಬ್ಬರು ತಿಳಿಸಿದ್ದಾರೆ.
ಕೃತ್ಯಕ್ಕೆ ಪ್ರಿನ್ಸ್ ಬಳಸಿದ್ದ ಪಿಸ್ತೂಲ್ ಅಕ್ರಮವಾಗಿ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.