ಚೆನ್ನೈ: ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಶ್ರೀಲಂಕಾದಿಂದ ಹಿಂತಿರುಗಿ ಹೋಂ ಕ್ವಾರಂಟೈನ್ನಲ್ಲಿದ್ದ 35 ವರ್ಷದ ವ್ಯಕ್ತಿಯೊಬ್ಬ ತಮಿಳುನಾಡಿನ ಹಳ್ಳಿಯೊಂದರಲ್ಲಿ ಮಹಿಳೆಯ ಕತ್ತನ್ನು ಕಚ್ಚಿ ಕೊಂದಿರುವ ಘಟನೆ ನಡೆದಿದೆ.
ರಾತ್ರಿ ಮನೆಯಿಂದ ಬೆತ್ತಲೆಯಾಗಿ ಓಡಿಹೋದ ವ್ಯಕ್ತಿಯು 80 ವರ್ಷದ ಮಹಿಳೆಯ ಕತ್ತಿಗೆ ಕಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ವೇಳೆ ಪರಿಸ್ಥಿತಿಯು ಗಂಭೀರಗೊಂಡು ಭಾನುವಾರ ಆಕೆ ಮೃತಪಟ್ಟಿದ್ದಾಳೆ.
ಆರೋಪಿ ಮಣಿಕಂಠನ್ ಎಂಬಾತ ಮಾನಸಿಕ ಅಸ್ವಸ್ಥನಾಗಿದ್ದು, 2010ರಲ್ಲಿ ಮಧುರೈನಲ್ಲಿ ಚಿಕಿತ್ಸೆ ಪಡೆದಿದ್ದ. ಮನೆಯಲ್ಲಿಯೇ ಇದ್ದದ್ದರಿಂದಾಗಿ ಶುಕ್ರವಾರ ರಾತ್ರಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಓಡಿಹೋಗಿದ್ದಾನೆ. ಮನೆಯಿಂದ 100 ಮೀಟರ್ ದೂರಕ್ಕೆ ತೆರಳಿ ಮನೆಯ ಹೋರಭಾಗದಲ್ಲಿ ಕುಳಿತಿದ್ದ ವೃದ್ಧ ಮಹಿಳೆಯನ್ನು ಗುರಿಯಾಗಿಸಿಕೊಂಡು ಕುತ್ತಿಗೆಗೆ ಕಚ್ಚಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯ ಕುಟುಂಬಸ್ಥರ ಪ್ರಕಾರ, ಮಣಿಕಂಠನ್ ಶ್ರೀಲಂಕಾದಿಂದ ಹಿಂತಿರುಗಿದ್ದ ಅಲ್ಲಿ ತನ್ನ ವ್ಯವಹಾರದಲ್ಲಿ ಉಂಟಾದ ನಷ್ಟದ ಬಗ್ಗೆ ತಲೆಕೆಡಿಸಿಕೊಂಡಿದ್ದ ಮತ್ತು ಅವನ ಮಾನಸಿಕ ಆರೋಗ್ಯ ಹದಗೆಟ್ಟಿತ್ತು ಎಂದಿದ್ದಾರೆ.
ಸದ್ಯ ಆರೋಪಿ ಮಣಿಕಂಠನ್ ಅನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.