ನವದೆಹಲಿ:ಫ್ರಾನ್ಸ್ನ ಡಾಸೋ ಏವಿಯೇಷನ್ ಕಂಪನಿ ನಿರ್ಮಿತ ಮೊದಲ ರಫೇಲ್ ಯುದ್ಧ ವಿಮಾನ ದೇಶದ ರಕ್ಷಣಾ ವ್ಯವಸ್ಥೆಗೆ ಸೇರ್ಪಡೆಯಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಫ್ರಾನ್ಸ್ನಲ್ಲಿ ಈ ವಿಮಾನವನ್ನು ಅಧಿಕೃತವಾಗಿ ಪಡೆದುಕೊಂಡ ವೇಳೆಯ ಛಾಯಾಚಿತ್ರದಲ್ಲಿ ಹಿನ್ನೆಲೆಯಾಗಿ ವಿಮಾನ ಹಾಗೂ ಅವರ ಜತೆಗೆವಾಯುಪಡೆಯ ಹಿರಿಯ ಅಧಿಕಾರಿಗಳು ಇರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿದೆ.
ಚಿತ್ರದಲ್ಲಿ ಸಚಿವ ಹಾಗೂ ಅಧಿಕಾರಿಗಳ ಮಧ್ಯೆ ನಿಂತಿದ್ದವರೇ ಈಚೆಗೆ ನಿಯೋಜನೆ ಗೊಂಡ ‘ಗೋಲ್ಡನ್ ಆ್ಯರೊ’ 17 ಸ್ಕ್ವಾಡ್ರನ್ನ ಕಮಾಂಡಿಂಗ್ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಹರ್ಕಿರತ್ ಸಿಂಗ್.
ಈ ಹಿಂದೆ ಮಿಗ್ 21 ವಿಮಾನದ ಪೈಲಟ್ ಆಗಿದ್ದ ಗ್ರೂಪ್ ಕ್ಯಾಪ್ಟನ್ ಹರ್ಕಿರತ್ ಸಿಂಗ್ ಅವರು ‘ಅಸಾಧಾರಣ ಧೈರ್ಯ‘ ಮತ್ತು ವಿಮಾನವನ್ನು ಉಳಿಸಿಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಮೆರೆದ ಸಾಹಸಕ್ಕೆ 2009ರಲ್ಲಿ ‘ಶೌರ್ಯ ಚಕ್ರ‘ವನ್ನೂ ಪಡೆದಿದ್ದಾರೆ.
2008ರ ಸೆ.23ರ ರಾತ್ರಿ ಏನಾಯಿತು?
ಆಗ ಸ್ಕ್ವಾಡ್ರನ್ನ ನಾಯಕರಾಗಿದ್ದಹರ್ಕಿರತ್ ಸಿಂಗ್ 2008ರ ಸೆ.23ರ ರಾತ್ರಿ ಮಿಗ್ 21ರಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಎರಡು ವಿಮಾನಗಳ ಮಧ್ಯೆಕೇವಲ ನಾಲ್ಕು ಕಿ.ಮೀ. ಅಂತರದದಲ್ಲಿದ್ದಾಗ ವಿಮಾನದ ವೇಗವನ್ನು ಕಡಿಮೆ ಮಾಡಲು ಯತ್ನಿಸಿದ್ದಾರೆ. ಈ ಹಂತದಲ್ಲಿ ಎಂಜಿನ್ನಿಂದ ಕಿಡಿ ಹೊರ ಬಂದು,ಮೂರು ಬಾರಿ ದೊಡ್ಡ ಪ್ರಮಾಣದಲ್ಲಿ ಸದ್ದು ಕೇಳಿಸಿದೆ. ಈ ಎಲ್ಲಾ ತಾಂತ್ರಿಕ ಸಮಸ್ಯೆಗಳ ಮಧ್ಯೆಯೂ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ.
ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಹರ್ಕಿರತ್ ಸಿಂಗ್ ಅವರು ತಮ್ಮ ಜೀವದ ಹಂಗು ತೊರೆದು ತೆಗೆದುಕೊಂಡ ತ್ವರಿತ ಮತ್ತು ಸರಿಯಾದ ನಿರ್ಧಾರಗಳು ಸಂಭವಿಸಬಹುದಾಗಿದ್ದ ಹಾನಿ ಮತ್ತು ಜೀವ ಅಪಾಯ ತಪ್ಪಿಸಿದ್ದವು. ಈ ಬಗ್ಗೆ ಅವರಿಗೆ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಉಲ್ಲೇಖಿಸಲಾಗಿದೆ.
ವಾಯುಪಡೆಯ ಮುಖ್ಯಸ್ಥರಾಗಿದ್ದ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಅವರು ಸೆ.10ರಂದು ಪಂಜಾಬ್ನ ಅಂಬಾಲದಲ್ಲಿ ರಫೇಲ್ ಜೆಟ್ ನಿರ್ವಹಿಸುವ 17 ಸ್ಕ್ವಾಡ್ರನ್ಗಳ ಕಮಾಂಡಿಂಗ್ ಅಧಿಕಾರಿಗಳ ಗ್ರೂಪ್ ಕ್ಯಾಪ್ಟನ್ ಹರ್ಕಿರತ್ ಸಿಂಗ್ ಅವರಿಗೆ ‘ಸ್ಕ್ವಾಡ್ರನ್’ಚಿಹ್ನೆಯನ್ನು ಹಸ್ತಾಂತರಿಸಿ, ಸಂತಸ ವ್ಯಕ್ತಪಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.