
ರಾಹುಲ್ ಗಾಂಧಿ
ನವದೆಹಲಿ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಆತ್ಮಚರಿತ್ರೆಯ ಕುರಿತು ‘ದಿ ಕ್ಯಾರವಾನ್’ನಲ್ಲಿ ಪ್ರಟಕವಾದ ಲೇಖನವನ್ನು ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಂಗಳವಾರ ದೃಢೀಕರಿಸಿದರು. ಇದು ಸದನದಲ್ಲಿ ಮತ್ತೆ ಗದ್ದಲಕ್ಕೆ ಕಾರಣವಾಯಿತು.
ರಾಹುಲ್ ಗಾಂಧಿಯವರು ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದರು. ಈ ವೇಳೆ ಇಂದು (ಮಂಗಳವಾರ) ಕೂಡ ಇದೇ ವಿಚಾರವನ್ನು ಪ್ರಸ್ತಾಪಿಸಿ, ಲೇಖನದ ಪ್ರತಿಯನ್ನು ಲೋಕಸಭೆಯಲ್ಲಿ ದೃಢೀಕರಿಸಿದ್ದಾರೆ.
‘ನಾನು ಎಂ. ಎಂ. ನವರಣೆ ಅವರ ಆತ್ಮಚರಿತ್ರೆಯ ಕುರಿತಾದ ಲೇಖನವನ್ನು ದೃಢೀಕರಿಸಿದ್ದೇನೆ’ ಎಂದು ಅವರು ಹೇಳಿದರು.
ಲೋಕಸಭೆಯ ಕಲಾಪದಲ್ಲಿ ಯಾವುದೇ ದಾಖಲೆಯನ್ನು ದೃಢೀಕರಿಸುವಾಗ, ಸದಸ್ಯರು ತಮ್ಮ ಜ್ಞಾನದ ಮಟ್ಟಿಗೆ ಅದು ಸರಿಯಾಗಿದೆ ಎಂಬುದನ್ನು ದೃಢೀಕರಿಸಿ ಸಹಿ ಮಾಡಿದ ಪ್ರತಿಯನ್ನು ಸಲ್ಲಿಸಬೇಕು.
ಸದನದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಪ್ರಸಾದ್ ಟೆನ್ನೇಟಿ ಅವರು, ರಾಹುಲ್ ಗಾಂಧಿ ಬಳಿ ಸಹಿ ಮಾಡಿದ ಪ್ರತಿಯನ್ನು ಮಂಡಿಸಲು ಕೇಳಿಕೊಂಡರು. ನಂತರ ಅದನ್ನು ಪರಿಶೀಲಿಸಿ ಹಿಂತಿರುಗಿಸುವುದಾಗಿ ಹೇಳಿದರು.
ರಾಹುಲ್ ಗಾಂಧಿಯವರು ಲೇಖನವನ್ನು ಉಲ್ಲೇಖಿಸಿ ಮಾತನಾಡಲು ಪ್ರಯತ್ನಿಸಿದಾಗ ಸದನದಲ್ಲಿ ಮತ್ತೆ ಗದ್ದಲ ಉಂಟಾದ ಹಿನ್ನೆಲೆ, ಟೆನ್ನೇಟಿ ಅವರು ಕಲಾಪವನ್ನು ಮಧ್ಯಾಹ್ನ 3 ಗಂಟೆಯವರೆಗೆ ಮುಂದೂಡಿದರು.
ರಾಹುಲ್ ಗಾಂಧಿಯವರು ಸೋಮವಾರದ ಸಂಸತ್ ಕಲಾಪದ ವೇಳೆ 2020ರ ಭಾರತ-ಚೀನಾ ಸಂಘರ್ಷದ ಕುರಿತು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆಯ ಕುರಿತು ಉಲ್ಲೇಖಿಸಲು ಮುಂದಾದಾಗ ಗದ್ದಲ ಭುಗಿಲೆದ್ದಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನಾಯಕರು ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ರಾಹುಲ್ ಗಾಂಧಿಯವರಿಗೆ ಈ ವಿಚಾರವನ್ನು ಪ್ರಸ್ತಾಪಿಸಲು ಅವಕಾಶ ನೀಡಲಿಲ್ಲ.
‘ರಾಷ್ಟ್ರೀಯ ಭದ್ರತೆ’ಯ ವಿಷಯ ಎಂದು ನರವಣೆಯವರ ಅಪ್ರಕಟಿತ ಪುಸ್ತಕದ ಬಗ್ಗೆ ‘ದಿ ಕ್ಯಾರವಾನ್’ನಲ್ಲಿ ಬಂದ ಲೇಖನವನ್ನು ಉಲ್ಲೇಖಿಸಿದ್ದರು. ಇದಕ್ಕೆ ಆಡಳಿತ ಪಕ್ಷದಿಂದ ಭಾರಿ ವಿರೋಧ ಎದುರಾಗಿತ್ತು. ವಿರೋಧ ಪಕ್ಷಗಳ ಸದಸ್ಯರು ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತಿದ್ದರು. ಗದ್ದಲ ಉಂಟಾಗಿ ಕೊನೆಗೆ ಸದನವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.