
ರಾಹುಲ್ ಗಾಂಧಿ
ಬರ್ನಾಲಾ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ಭಾರತೀಯ ರೈತರನ್ನು ಸರ್ವನಾಶ ಮಾಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
‘ಮಜ್ದೂರ್ ಕಿಸಾನ್ ಮಹಾ ರ್ಯಾಲಿ’ ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಅಸಮಾಧಾನ ಇದ್ದ ಕಾರಣ ಒಪ್ಪಂದವು ನಾಲ್ಕು ತಿಂಗಳು ನನೆಗುದಿಗೆ ಬಿದ್ದಿತ್ತು’ ಎಂದು ಹೇಳಿದರು.
‘ಒಪ್ಪಂದದ ವಿಚಾರವಾಗಿ ನಾಲ್ಕು ತಿಂಗಳು ಯಾವುದೇ ಕ್ರಮ ಕೈಗೊಳ್ಳದ ಪ್ರಧಾನಿ ನರೇಂದ್ರ ಮೋದಿ ಅವರು 15 ನಿಮಿಷಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದು ಏಕೆ’ ಎಂದು ಪ್ರಶ್ನಿಸಿದರು.
‘ಭಾರತವು ಪ್ರತಿವರ್ಷ ₹9 ಲಕ್ಷ ಕೋಟಿ ಮೌಲ್ಯದ ಅಮೆರಿಕ ಉತ್ಪನ್ನಗಳನ್ನು ಖರೀದಿಸಲಿದೆ ಎಂದು ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭರವಸೆ ನೀಡಿದ್ದಾರೆ. ಈ ಒಪ್ಪಂದವು ಭಾರತೀಯ ರೈತರನ್ನು ನಾಶ ಮಾಡಲಿದೆ’ ಎಂದು ಹೇಳಿದರು.
‘ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಲೋಕಸಭೆಯಲ್ಲಿ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ. ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ.ನರವಣೆ ಅವರ ‘ಅಪ್ರಕಟಿತ’ ಪುಸ್ತಕದ ಬಗ್ಗೆ ಉಲ್ಲೇಖ ಮಾಡುತ್ತೇನೆ ಎಂಬ ಕಾರಣಕ್ಕಾಗಿ ಅವಕಾಶ ನೀಡಲಿಲ್ಲ’ ಎಂದರು.
ಕಾಂಗ್ರೆಸ್ನ ಹಿರಿಯ ನಾಯಕರಾದ ಕೆ.ಸಿ.ವೇಣುಗೋಪಾಲ್, ಭೂಪೇಶ್ ಬಘೇಲ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ರಾಜಾ ಮತ್ತಿತರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ನಿರ್ಮಲಾಗೆ ರಾಹುಲ್ ಪತ್ರ
ನಿವೃತ್ತ ಸೈನಿಕರ ವಂತಿಗೆ ಆರೋಗ್ಯ ಯೋಜನೆಗೆ (ಇಸಿಎಚ್ಎಸ್) ಅನುದಾನ ಬಿಡುಗಡೆ ಮಾಡುವಂತೆ ಮತ್ತು ಅಂಗವಿಕಲರ ಪಿಂಚಣಿಗೆ ತೆರಿಗೆ ವಿನಾಯಿತಿ ನೀಡುವಂತೆ ರಾಹುಲ್ ಗಾಂಧಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.
ಹಿರಿಯ ಸೈನಿಕರಿಗೆ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ಯೋಜನೆಗೆ ಅಗತ್ಯವಾದ ಅನುದಾನ ಬೇಕಿದೆ ಎಂದು ಮನವಿ ಮಾಡಿದ್ದಾರೆ. ಯೋಜನೆಯು ಅನುದಾನದ ಕೊರತೆ ಎದುರಿಸುತ್ತಿದೆ. ಸುಮಾರು 12000 ಕೋಟಿ ಮೆಡಿಕಲ್ ಬಿಲ್ ಪಾವತಿ ಬಾಕಿ ಇದೆ ಎಂದು ತಿಳಿಸಿದ್ದಾರೆ. ಪತ್ರದ ಪ್ರತಿಯೊಂದನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೂ ಕಳುಹಿಸಿದ್ದಾರೆ.
‘ಸಂಗೀತಕ್ಕೆ ಎಲ್ಲೆ ಇಲ್ಲ’
ಏಕತೆ ಪರಂಪರೆಯನ್ನು ಸಂಭ್ರಮಿಸಲು ಸಂಗೀತವು ಪ್ರಬಲ ಮಾಧ್ಯಮ. ಅದಕ್ಕೆ ಯಾವುದೇ ಎಲ್ಲೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಈಶಾನ್ಯ ಸಂಗೀತ ಉತ್ಸವದಲ್ಲಿ ತಮಗಾದ ಅನುಭವದ ಕುರಿತ ವಿಡಿಯೊವನ್ನು ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಕಲಾವಿದರೊಂದಿಗೆ ಸಂವಾದ ನಡೆಸಿದ ದೃಶ್ಯ ವಿಡಿಯೊದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.