ನವದೆಹಲಿ:ಕೋವಿಡ್ನಿಂದ ಸಂಭವಿಸಿದ ಸಾವಿನ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಕೋವಿಡ್ ಸಾವುಗಳಿಗೆ ಸಂಬಂಧಿಸಿದ ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶ ಮತ್ತು ರಾಹುಲ್ ಆರೋಪಗಳು ತಪ್ಪಾಗಿವೆ ಎಂದು ಬಿಜೆಪಿ ಹೇಳಿದೆ.
‘ಕೋವಿಡ್ನಿಂದಾಗಿ ಭಾರತದಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ಲೆಕ್ಕಾಚಾರ ಹಾಕಲು ವಿಶ್ವ ಆರೋಗ್ಯ ಸಂಸ್ಥೆ ಅನುಸರಿಸಿರುವ ವಿಧಾನ ದೋಷಪೂರಿತವಾಗಿದೆ. ಈ ಬಗ್ಗೆ ಭಾರತ ಸರ್ಕಾರವು ವಿಶ್ವ ಆರೋಗ್ಯ ಸಂಸ್ಥೆಗೆ ಆಕ್ಷೇಪಣೆ ಸಲ್ಲಿಸಿದೆ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಕುಂದಿಸಬೇಕು ಎಂದು 2014ರಿಂದಲೂ ರಾಹುಲ್ ಗಾಂಧಿ ಪದೇಪದೇ ಪ್ರಯತ್ನಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಭಾರತದ ವರ್ಚಸ್ಸು ಕುಂದುವಂತೆ ಮಾಡುತ್ತಿದ್ದಾರೆ’ ಎಂದು ಸಂಬಿತ್ ದೂರಿದ್ದಾರೆ.
ಕೋವಿಡ್ ಸಾವಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆ ವರದಿ ಬಿಡುಗಡೆಯಾದ ಬೆನ್ನಲ್ಲೇ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್ ಗಾಂಧಿ, ಕೋವಿಡ್ ಸಾಂಕ್ರಾಮಿಕದಿಂದ 47 ಲಕ್ಷ ಭಾರತೀಯರು ಮೃತಪಟ್ಟಿದ್ದಾರೆ. ಸರ್ಕಾರ ಹೇಳಿಕೊಂಡಂತೆ ಕೇವಲ 4.8 ಲಕ್ಷ ಮಂದಿಯಲ್ಲ. ವಿಜ್ಞಾನ ಸುಳ್ಳು ಹೇಳುವುದಿಲ್ಲ, ಮೋದಿ ಹೇಳುತ್ತಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳನ್ನು ಗೌರವಿಸಿ. ₹4 ಲಕ್ಷ ಪರಿಹಾರವನ್ನು ನೀಡಿ ಅವರನ್ನು ಬೆಂಬಲಿಸಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.