RahulGandhi
ಪಟ್ನಾ: ಎನ್ಎಸ್ಯುಐ ಉಸ್ತುವಾರಿ ಕನ್ಹಯ್ಯ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಪಾಲ್ಗೊಂಡರು.
ಬಿಹಾರದ ಬೆಗೂಸರಾಯದಲ್ಲಿ ನಡೆಯುತ್ತಿರುವ ನಿರುದ್ಯೋಗ ಮತ್ತು ವಲಸೆ ಸಮಸ್ಯೆಗಳ ಕುರಿತು ಹಮ್ಮಿಕೊಳ್ಳಲಾದ (ಪಲಾಯನ ನಿಲ್ಲಿಸಿ, ಕೆಲಸ ಕೊಡಿ) ಪಾದಯಾತ್ರೆಯಲ್ಲಿ ಬಿಳಿ ಟಿ-ಶರ್ಟ್ ಧರಿಸಿ ರಾಹುಲ್ ಭಾಗಿಯಾದರು.
ಈ ವರ್ಷ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ನೀಡಲಾಗಿದೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ಪಟ್ನಾದ ಜಯ ಪ್ರಕಾಶ್ ನಾರಾಯಣ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಅವರನ್ನು ಪಕ್ಷದ ನಾಯಕರು ಬರಮಾಡಿಕೊಂಡರು.
ಇಂದು ಪಟ್ನಾದಲ್ಲಿ 'ಸಂವಿಧಾನ ಸುರಕ್ಷಾ ಸಮ್ಮೇಳನ' ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಹುಲ್ ಮಾತನಾಡಲಿದ್ದಾರೆ.
‘ನಿರುದ್ಯೋಗ ಮತ್ತು ವಲಸೆ ಸಮಸ್ಯೆಗಳ ಕುರಿತು ಹಮ್ಮಿಕೊಳ್ಳಲಾದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ನಾನು ಬಿಹಾರದ ಬೆಗೂಸರಾಯಕ್ಕೆ ಬರುತ್ತಿದ್ದೇನೆ. ಉದ್ಯೋಗ ಮತ್ತು ವಲಸೆ ಸಮಸ್ಯೆಗಳ ಕುರಿತು ಸರ್ಕಾರದ ಬಣ್ಣ ಬಯಲು ಮಾಡಲು ಬಿಳಿ ಅಂಗಿ ತೊಟ್ಟು ಈ ಚಳವಳಿಯಲ್ಲಿ ಪಾಲ್ಗೊಳ್ಳಬೇಕು’ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಭಾನುವಾರ ಕಾರ್ಯಕರ್ತರಿಗೆ, ಯುವಕರಿಗೆ ಮನವಿ ಮಾಡಿದ್ದರು.
ರಾಜ್ಯದಲ್ಲಿ ಉದ್ಯೋಗ ಮತ್ತು ವಲಸೆ ವಿಚಾರಗಳನ್ನು ಮುಂದಿಟ್ಟುಕೊಂಡು ಕನ್ಹಯ್ಯ ಕುಮಾರ್ ಮಾರ್ಚ್ 16ರಿಂದ ರಾಜ್ಯದಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.