ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಸ್ಥರನ್ನು ಭೇಟಿ ಮಾಡಲುಮೀರತ್ಗೆ ತೆರಳಲು ಮುಂದಾಗಿದ್ದಾಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಉತ್ತರ ಪ್ರದೇಶದ ಪೊಲೀಸರು ತಡೆದಿದ್ದಾರೆ.
ಕಳೆದ ವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಪ್ರತಿಭಟನೆಯಲ್ಲಿ ಸುಮಾರು ಆರು ಜನರು ಪ್ರಾಣ ಕಳೆದುಕೊಂಡಿದ್ದರು.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರಾ ಇಂದು ಮುಂಜಾನೆ ಎಸ್ಯುವಿಯಲ್ಲಿ ಮೀರತ್ಗೆ ಭೇಟಿ ನೀಡಲು ತೆರಳುತ್ತಿದ್ದರು. ಈ ವೇಳೆ ಪೊಲೀಸರು ದೆಹಲಿಯಿಂದ 60 ಕಿ.ಮೀ. ದೂರದ ಮೀರತ್ಗೆ ತೆರಳದಂತೆ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಅತಿ ಹೆಚ್ಚು ಜನ ಸೇರುವುದನ್ನು ನಿಷೇಧಿಸಿರುವ ಕಾರಣದಿಂದಾಗಿ ಪೊಲೀಸರು ಪ್ರವೇಶ ನಿರಾಕರಿಸಿದ್ದು, ಅಲ್ಲಿಂದ ಕಾಂಗ್ರೆಸ್ ನಾಯಕರು ದೆಹಲಿಗೆ ಹಿಂತಿರುಗಿದ್ದಾರೆ.
ಈ ಕುರಿತು ಯಾವುದೇ ಆದೇಶದ ಪ್ರತಿಯನ್ನು ತೋರಿಸುವಂತೆ ಪೊಲೀಸರನ್ನು ನಾವು ಕೇಳಿದೆವು. ಆದರೆ ಅವರು ಯಾವುದನ್ನು ತೋರಿಸಲಿಲ್ಲ. ಆದರೆ ದಯಮಾಡಿ ಹಿಂತಿರುಗಿ ಎಂದಷ್ಟೇ ಹೇಳಿದರು. ಹಾಗಾಗಿ ನಮ್ಮ ಭೇಟಿಯನ್ನು ಮುಂದೂಡಿದ್ದೇವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಪೊಲೀಸರು ಕೇವಲ ಮೂರು ಜನರು ಮಾತ್ರ ಅಲ್ಲಿಗೆ ತೆರಳುವಂತೆ ಸೂಚಿಸಿದರು. ಆದರೆ ಅಲ್ಲಿಂದ ಮುಂದೆ ತೆರಳಲು ಅನುಮತಿ ನೀಡಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ.
ಶನಿವಾರವಷ್ಟೇ ಪ್ರಿಯಾಂಕಾ ಗಾಂಧಿ ಅವರು, ಪ್ರತಿಭಟನೆಯಲ್ಲಿ ಮೃತಪಟ್ಟಿದ್ದ ಇಬ್ಬರು ಸಂತ್ರಸ್ತರ ಬಿಜ್ನೋರ್ನಲ್ಲಿನ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.