ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಶ್ರೇಣಿಯನ್ನು ವ್ಯಾಖ್ಯಾನಿಸುವ ಮಾರ್ಗವಾಗಿ ಒಂದು ರಾಷ್ಟ್ರದ ಮುಖ್ಯಸ್ಥರ ಹತ್ಯೆಯನ್ನು ಬೆಂಬಲಿಸುತ್ತಾರೆಯೇ ಎಂದು ಪ್ರಶ್ನಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಇರಾನ್ ಮೇಲಿನ ಏಕಪಕ್ಷೀಯ ದಾಳಿಗಳು ಹಾಗೂ ಇತರ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲಿನ ಇರಾನ್ನ ದಾಳಿಗಳನ್ನು ಖಂಡಿಸಬೇಕು ಎಂದು ಅವರು ಹೇಳಿದ್ದಾರೆ.
‘ಪ್ರಧಾನಿ ಮೌನವು ಈಗ ವಿಶ್ವದಲ್ಲಿ ಭಾರತದ ಸ್ಥಾನಮಾನವನ್ನು ಕುಗ್ಗಿಸುತ್ತಿದೆ’ಎಂದು ರಾಹುಲ್ ಎಕ್ಸ್ ಪೋಸ್ಟ್ನಲ್ಲಿ ಕಿಡಿಕಾರಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದೆ. ಈ ಸಂಬಂಧ ಮೋದಿ ನಿಲುವನ್ನು ರಾಹುಲ್ ಪ್ರಶ್ನಿಸಿದ್ದಾರೆ.
ಇದು ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಹಗೆತನವು ದುರ್ಬಲ ಪ್ರದೇಶವನ್ನು ವ್ಯಾಪಕ ಸಂಘರ್ಷದತ್ತ ತಳ್ಳುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.
ಸುಮಾರು ಒಂದು ಕೋಟಿ ಭಾರತೀಯರು ಸೇರಿದಂತೆ ಕೋಟ್ಯಂತರ ಜನರು ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
‘ಯಾವುದೇ ಪ್ರದೇಶದ ಸಾರ್ವಭೌಮತ್ವವನ್ನು ಉಲ್ಲಂಘಿಸಿ ನಡೆಸುವ ದಾಳಿಗಳು ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತವೆ. ಇರಾನ್ ಮೇಲಿನ ಏಕಪಕ್ಷೀಯ ದಾಳಿಗಳು ಮತ್ತು ಪಶ್ಚಿಮ ಏಷ್ಯಾದ ಇತರ ರಾಷ್ಟ್ರಗಳ ಮೇಲಿನ ಇರಾನ್ನ ದಾಳಿಗಳನ್ನು ಖಂಡಿಸಬೇಕು. ಹಿಂಸಾಚಾರವು ಹಿಂಸಾಚಾರಕ್ಕೇ ಕಾರಣವಾಗುತ್ತದೆ. ಮಾತುಕತೆ ಮತ್ತು ಸಂಯಮವು ಶಾಂತಿಗೆ ಏಕೈಕ ಮಾರ್ಗವಾಗಿ ಉಳಿದಿದೆ’ ಎಂದು ರಾಹುಲ್ ಹೇಳಿದ್ದಾರೆ.
‘ಭಾರತವು ನೈತಿಕವಾಗಿ ಸ್ಪಷ್ಟವಾಗಿರಬೇಕು. ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವ ಜೀವಗಳ ರಕ್ಷಣೆಯಲ್ಲಿ ನಾವು ಸ್ಪಷ್ಟವಾಗಿ ಮಾತನಾಡುವ ಧೈರ್ಯವನ್ನು ಹೊಂದಿರಬೇಕು. ನಮ್ಮ ವಿದೇಶಾಂಗ ನೀತಿಯು ಸಾರ್ವಭೌಮತ್ವ ಮತ್ತು ವಿವಾದಗಳ ಶಾಂತಿಯುತ ಪರಿಹಾರದಲ್ಲಿ ಬೇರೂರಿದೆ. ಅದು ಸ್ಥಿರವಾಗಿರಬೇಕು’ಎಂದು ಅವರು ತಿಳಿಸಿದ್ದಾರೆ.
ವಿಶ್ವ ಶ್ರೇಣಿಯನ್ನು ವ್ಯಾಖ್ಯಾನಿಸುವ ಮಾರ್ಗವಾಗಿ ಒಂದು ರಾಷ್ಟ್ರದ ಮುಖ್ಯಸ್ಥರ ಹತ್ಯೆಯನ್ನು ಮೋದಿ ಬೆಂಬಲಿಸುತ್ತಾರೆಯೇ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಶನಿವಾರ ಇರಾನ್ ಮೇಲೆ ಭೀಕರ ದಾಳಿ ನಡೆಸಿದ್ದವು. ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.