ನವದೆಹಲಿ: ದ್ವೇಷ, ಹಿಂಸೆ ಮತ್ತು ಬಹಿಷ್ಕಾರಗಳು ನಮ್ಮ ದೇಶವನ್ನು ದುರ್ಬಲಗೊಳಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಹಿಂದೂ –ಮುಸ್ಲಿಂ ಸಂಘರ್ಷ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ಸಹೋದರತ್ವ, ಶಾಂತಿ ಮತ್ತು ಸೌಹಾರ್ದತೆ ದೇಶದ ಪ್ರಗತಿಯ ಹಾದಿಯನ್ನು ಸುಗಮಗೊಳಿಸಿವೆ. ನ್ಯಾಯಯುತವಾದ, ಅಂತರ್ಗತ ಭಾರತವನ್ನು ಭದ್ರಪಡಿಸಿಕೊಳ್ಳಲು ಒಟ್ಟಾಗಿ ನಿಲ್ಲೋಣ’ ಎಂದು ಕರೆ ನೀಡಿದ್ದಾರೆ.
ಜಾರ್ಖಂಡ್, ಮಧ್ಯಪ್ರದೇಶ, ಗುಜರಾತ್ನ ಕೆಲವೆಡೆ ಭಾನುವಾರ ನಡೆದ ರಾಮ ನವಮಿ ಉತ್ಸವದ ವೇಳೆ ಹಿಂಸಾಚಾರಗಳು ನಡೆದಿದ್ದವು.
ಜಾರ್ಖಂಡ್ನ ಲೋಹಾರ್ದಾಗಾದಲ್ಲಿ ನಡೆದ ಗಲಭೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು 12 ಜನರು ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಖಾರ್ಗೋನ್ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಗಲಭೆ ಸಂಬಂಧ 77 ಜನರನ್ನು ಬಂಧಿಸಲಾಗಿದೆ. ಘಟನೆಯಲ್ಲಿ 24 ಜನರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಜರಾತ್ನ ಆನಂದ್ ಜಿಲ್ಲೆಯ ಖಂಬತ್ ಪ್ರದೇಶದಲ್ಲಿ ರಾಮ ನವಮಿ ವೇಳೆ ನಡೆದ ಹಿಂಸಾಚಾರ ಮತ್ತು ಕಲ್ಲು ತೂರಾಟ ಸಂಬಂಧ ಒಂಬತ್ತು ಜನರನ್ನು ಬಂಧಿಸಲಾಗಿದೆ. ಇಲ್ಲಿ ಭಾನುವಾರ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದರು.
ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಸೆಂಧ್ವ ಪಟ್ಟಣದಲ್ಲಿ ರಾಮನ ಉತ್ಸವ ಆಚರಣೆ ವೇಳೆ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್ ಠಾಣಾ ಉಸ್ತುವಾರಿ ಮತ್ತು ಇತರ ಐದು ಜನರು ಗಾಯಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.