ಪಟ್ನಾ: ಮಹಾಘಟಬಂಧನ್ ಮೈತ್ರಿಯ ಒತ್ತಡದಿಂದಾಗಿ ಬಿಹಾರದಲ್ಲಿ ಜಾತಿಗಣತಿ ನಡೆಸಲಾಗಿದೆ ಎನ್ನುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆ ‘ಅಸಂಬದ್ಧ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.
‘ಜಾತಿ ಗಣತಿಯನ್ನು ನಡೆಸಬೇಕು ಎನ್ನುವ ನಿರ್ಧಾರವನ್ನು ತೆಗೆದುಕೊಂಡವನು ನಾನು. ಈಗ ಬೇರೆಯವರು ಅದರ ಶ್ರೇಯಸ್ಸನ್ನು ತೆಗೆದುಕೊಳ್ಳುತ್ತಿದ್ದಾರೆ’ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಪುರ್ನಿಯಾದಲ್ಲಿ ನಡೆದ ಭಾರತ ಜೋಡೊ ನ್ಯಾಯ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ‘ಮಹಾಘಟಬಂಧನ್ ಮೈತ್ರಿಪಕ್ಷಗಳ ಒತ್ತಡದಿಂದಾಗಿ ಜಾತಿಗಣತಿ ನಡೆಸಲು ನಿತೀಶ್ ಒಪ್ಪಿಕೊಂಡಿದ್ದರು’ ಎಂದು ಹೇಳಿದ್ದರು.
ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರು ಏನೂ ಮಾಡುತ್ತಿಲ್ಲ. ಸೀಟು ಹಂಚಿಕೆ ಬಗ್ಗೆಯೂ ಮಾತನಾಡುತ್ತಿಲ್ಲ. ಪ್ರಮಾಣಿಕವಾಗಿ ಹೇಳಬೇಕಾದರೆ, ಮೈತ್ರಿಕೂಟಕ್ಕೆ ಇಂಡಿಯಾ ಎನ್ನುವ ಹೆಸರಿಡುವುದೂ ನನ್ನ ಆಯ್ಕೆಯಾಗಿರಲಿಲ್ಲ. ಅವರಾಗಿಯೇ ನಿರ್ಧಾರ ತೆಗೆದುಕೊಂಡರು. ನಾನು ಈ ಮರಳಿ ಇಲ್ಲಿಗೆ (ಎನ್.ಡಿ.ಎ.) ಬಂದಿದ್ದೇನೆ. ಇನ್ನು ಎಲ್ಲಿಗೂ ಹೋಗುವುದಿಲ್ಲ’ ಎಂದು ಹೇಳಿದರು.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಮೇಲೆ ನಡೆಯುತ್ತಿರುವ ಜಾರಿ ನಿರ್ದೇಶನಲಾಯದ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇ.ಡಿ ತನ್ನ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.