ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಬುಧವಾರ ಭೇಟಿ ಮಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ತಮ್ಮ ವಿರುದ್ಧ ಬಿಜೆಪಿಯ ಸದಸ್ಯರು ಆಡಿರುವ ಕೆಲವು ಮಾತುಗಳನ್ನು ಕಲಾಪದ ಕಡತಗಳಿಂದ ತೆಗೆಯಬೇಕು ಎಂದು ಮನವಿ ಮಾಡಿದರು. ಸದನದಲ್ಲಿ ಕಲಾಪವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಕೋರಿದರು.
ಅದಾನಿ ವಿಚಾರದಲ್ಲಿ ಗಮನವನ್ನು ಬೇರೆಡೆ ತಿರುಗಿಸುವ ಉದ್ದೇಶದಿಂದ ಬಿಜೆಪಿಯು ತಮ್ಮ ವಿರುದ್ಧ ಆಧಾರವಿಲ್ಲದೆ ಆರೋಪಗಳನ್ನು ಮಾಡುತ್ತಿದೆ ಎಂದು ರಾಹುಲ್ ಹೇಳಿದರು. ಲೋಕಸಭೆಯಲ್ಲಿ ಶುಕ್ರವಾರದಿಂದ ಸಂವಿಧಾನದ ಬಗ್ಗೆ ಚರ್ಚೆ ಶುರುವಾಗಬೇಕು ಎಂಬುದು ತಮ್ಮ ಪಕ್ಷದ ಬಯಕೆ, ಸದನದ ಕಲಾಪವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ತಮ್ಮ ಹೊಣೆ ಅಲ್ಲದಿದ್ದರೂ ಕಲಾಪ ಸುಗಮವಾಗಿ ನಡೆಯುವಂತೆ ತಾವು ಖಾತರಿಪಡಿಸುವುದಾಗಿ ರಾಹುಲ್ ಹೇಳಿದರು.
‘ಸ್ಪೀಕರ್ ಜೊತೆ ನಾನು ಮಾತುಕತೆ ನಡೆಸಿದೆ. ನನ್ನ ವಿರುದ್ಧದ ಅವಹೇಳನಕಾರಿ ಮಾತುಗಳನ್ನು ಕಡತದಿಂದ ತೆಗೆಯಬೇಕು ಎಂದು ನಮ್ಮ ಪಕ್ಷ ಹೇಳುತ್ತಿರುವುದನ್ನು ಅವರಿಗೆ ತಿಳಿಸಿದೆ. ಅವುಗಳನ್ನು ಪರಿಶೀಲಿಸುವುದಾಗಿ ಸ್ಪೀಕರ್ ಹೇಳಿದರು. ಬಿಜೆಪಿಯವರು ಆಧಾರವಿಲ್ಲದ ಆರೋಪ ಮಾಡುವುದನ್ನು ಮುಂದುವರಿಸಿದರೂ, ಕಲಾಪ ನಡೆಯಬೇಕು ಎಂಬುದು ನಮ್ಮ ತೀರ್ಮಾನ’ ಎಂದು ರಾಹುಲ್ ಅವರು ಸುದ್ದಿಗಾರರ ಬಳಿ ಹೇಳಿದರು.
‘ಬಿಜೆಪಿಯ ಸದಸ್ಯರು ನನ್ನ ವಿರುದ್ಧ ಯಾವ ವಿಷಯ ಬೇಕಿದ್ದರೂ ಪ್ರಸ್ತಾಪಿಸಿ ಮಾತನಾಡಬಹುದು. ಆದರೆ ಸಂವಿಧಾನದ ಕುರಿತ ಚರ್ಚೆ ನಡೆಯಲೇಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.