ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿಯವರ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ಮೂದಲಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಖರ್ಚೆ ಪೇ ಚರ್ಚಾ’ (ವೆಚ್ಚಗಳ ಕುರಿತು ಚರ್ಚೆ) ಕೂಡ ಇರಬೇಕು’. ಏಕೆಂದರೆ ಕೇಂದ್ರದ ತೆರಿಗೆ ಸಂಗ್ರಹ ಏರಿಕೆಯಿಂದಾಗಿ ಕಾರಿಗೆ ಇಂಧನ ಭರ್ತಿ ಮಾಡುವುದು ಪರೀಕ್ಷೆ ಎದುರಿಸಿದಂತೆಯೇ ಆಗುತ್ತಿದೆ. ಪ್ರಧಾನಿ ಇದನ್ನೇಕೆ ಚರ್ಚಿಸಬಾರದು’ ಎಂದು ಪ್ರಶ್ನಿಸಿ ಗುರುವಾರ ಟ್ವೀಟ್ ಮಾಡಿದ್ದಾರೆ.
ಇಂಧನ ಮತ್ತು ಅನಿಲ ದರ ನಿರಂತರ ಏರಿಕೆಯ ಕಾರಣವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದಷ್ಟೇ ಇಂಧನ ಮತ್ತು ಅನಿಲ ದರವನ್ನು ತಗ್ಗಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಬುಧವಾರ ನಡೆದ ವಾರ್ಷಿಕ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು, ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಪರೀಕ್ಷೆಗಳಿಗೆ ಹೆದರದೆ, ತಮ್ಮನ್ನು ತಾವು ಸುಧಾರಿಸಿಕೊಳ್ಳುವ ಪರೀಕ್ಷೆಯಾಗಿ ಭಾವಿಸಬೇಕು. ಪರೀಕ್ಷೆ ಎಂದಾಗ ಸಾಮಾಜಿಕ ಮತ್ತು ಕುಟುಂಬ ವಾತಾವರಣವು ಕೆಲವೊಮ್ಮೆ ವಿದ್ಯಾರ್ಥಿಗಳ ಸುತ್ತ ಒತ್ತಡ ಉಂಟುಮಾಡುತ್ತದೆ. ಇದು ಅಪೇಕ್ಷಣೀಯವಲ್ಲ’ ಎಂದು ಮೋದಿ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.