ಚಂಡೀಗಡ: ಪಂಜಾಬ್ ಮತ್ತು ಹರಿಯಾಣದ ಹಲವೆಡೆ ರೈತರು ರಸ್ತೆ ಹಾಗೂ ರೈಲು ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ಪ್ರತಿಭಟನೆ ನಡೆಸಿದರು.
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವೇಳೆ ಕೇಂದ್ರ ಸರ್ಕಾರವು ಹಲವು ಭರವಸೆಗಳನ್ನು ನೀಡಿತ್ತು. ಕೃಪಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ನಿಗದಿಗೆ ಕಾಯ್ದೆ ಜಾರಿಗೊಳಿಸುವುದಾಗಿಯೂ ಹೇಳಿತ್ತು. ಕಾಯ್ದೆಗಳು ರದ್ದಾದ ಒಂದು ವರ್ಷದ ಬಳಿಕವೂ ಕೇಂದ್ರ ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದು ಆರೋಪಿಸಿ ಸಂಯುಕ್ತ ಕಿಸಾನ್ ಮೋರ್ಚಾವು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಇದರ ಭಾಗವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರತಿಭಟನೆಗಳು ನಡೆದಿವೆ.
ನಮ್ಮ ಬೇಡಿಕೆಗಳಿಗೆ ಕೇಂದ್ರ ಕಿವಿಗೊಡುತ್ತಿಲ್ಲ. ಕೇಂದ್ರದ ಈ ಕ್ರಮವೇ ನಾವು ಪ್ರತಿಭಟಿಸುವಂತೆ ಮಾಡಿತು ಎಂದು ರೈತರು ಆರೋಪಿಸಿದ್ದಾರೆ. ಪ್ರತಿಭಟನೆ ವೇಳೆ ರೈತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಹರಿಯಾಣದ ಹಿಸಾರ್ನಲ್ಲಿ ಪ್ರತಿಭಟಿಸುತ್ತಿದ್ದ ವೇಳೆ, ಪ್ರತಿಕೃತಿ ದಹಿಸಲುರೈತರು ಮುಂದಾದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಯಿತು. ಮೊದಲು ಚಕ್ಕಾ ಜಾಮ್ (ರಸ್ತೆ ತಡೆ) ನಡೆಸಲು ನಿರ್ಧರಿಸಲಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆ ಮತ್ತು ತೀಜ್ ಹಬ್ಬ ಇರುವುದರಿಂದ ರಸ್ತೆತಡೆ ಯೋಜನೆಯನ್ನು ಕೈಬಿಡಲಾಯಿತು ಎಂದು ಹರಿಯಾಣದ ರೈತರು ಹೇಳಿದರು.
ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ ರಸ್ತೆ ಮತ್ತು ರೈಲು ತಡೆ ನಡೆಸಲಾಯಿತು.ಪ್ರತಿಭಟನೆಯ ಕಾರಣಕ್ಕಾಗಿ ಭಾರತೀಯ ರೈಲ್ವೆಯ ಫೆರೋಜಿಪುರ ವಿಭಾಗವು ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಿತು. ಅಲ್ಲದೆ ಹಲವು ರೈಲುಗಳ ಮಾರ್ಗಗಳನ್ನು ಬದಲು ಮಾಡಿತು. ಇದರಿಂದಾಗಿ ಹಲವು ಪ್ರಯಾಣಿಕರು ಗಂಟೆಗಟ್ಟಲೇ ರೈಲು ನಿಲ್ದಾಣದಲ್ಲಿ ಕಾಯುವಂತಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.