ADVERTISEMENT

‘ರೈಲು ತಡೆ’ ಪ್ರತಿಭಟನೆ: ಪಂಜಾಬ್‌ನಲ್ಲಿ ರೈಲು ಹಳಿಗಳ ಮೇಲೆ ಕುಳಿತು ರೈತರ ಧರಣಿ

ಪಿಟಿಐ
Published 10 ಮಾರ್ಚ್ 2024, 10:14 IST
Last Updated 10 ಮಾರ್ಚ್ 2024, 10:14 IST
<div class="paragraphs"><p>ಪಟಿಯಾಲದಲ್ಲಿ ರೈಲು ಹಳಿ ಮೇಲೆ ಕುಳಿತು ರೈತರ ಪ್ರತಿಭಟನೆ</p></div>

ಪಟಿಯಾಲದಲ್ಲಿ ರೈಲು ಹಳಿ ಮೇಲೆ ಕುಳಿತು ರೈತರ ಪ್ರತಿಭಟನೆ

   

ಪಿಟಿಐ

ಚಂಡೀಗಢ(ಪಂಜಾಬ್‌): ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿರುವ 'ರೈಲು ತಡೆ' ಪ್ರತಿಭಟನೆಯ ಭಾಗವಾಗಿ ರೈತರು ಭಾನುವಾರ ಪಂಜಾಬ್‌ನ ಹಲವೆಡೆ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.

ADVERTISEMENT

ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕೇಂದ್ರದ ವಿರುದ್ಧ ರೈತರು ಘೋಷಣೆ ಕೂಗಿದರು.

ಪಂಜಾಬ್‌ನ ಅಮೃತಸರ, ಲೂಧಿಯಾನ, ಟರಣ್ ಟರಣ್, ಹೋಶಿಯಾರ್‌ಪುರ, ಫಿರೋಜ್‌ಪುರ, ಫಜಿಲ್ಕಾ, ಸಂಗ್ರೂರ್, ಮಾನ್ಸಾ, ಮೊಗಾ ಮತ್ತು ಬಟಿಂಡಾ ಸೇರಿದಂತೆ 22 ಜಿಲ್ಲೆಗಳ 52 ಸ್ಥಳಗಳಲ್ಲಿ ರೈಲು ಹಳಿಗಳ ಮೇಲೆ ಕುಳಿತುಕೊಂಡು ರೈತರು ಪ್ರತಿಭಟನೆ ನಡೆಸಿದ್ದಾರೆ.

ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಹಿನ್ನೆಲೆ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಯಿತು. ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡರು ಈಗಾಗಲೇ ತಿಳಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ, ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರ ಇಳಿಕೆ, ರೈತರ ಮೇಲಿನ ಪೊಲೀಸ್‌ ಪ್ರಕರಣ ಹಿಂಪಡೆಯುವುದು ಮತ್ತು 2021ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು, 2013ರ ಭೂಸ್ವಾಧೀನ ಕಾಯಿದೆಯ ಮರುಸ್ಥಾಪನೆ, 2021ರ ರೈತ ಹೋರಾಟದಲ್ಲಿ ಮೃತ‍ಪಟ್ಟ ರೈತ ಕುಟುಂಬಕ್ಕೆ ಪರಿಹಾರ ಮುಂತಾದ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಫೆಬ್ರುವರಿ 13ರಿಂದ ದೆಹಲಿ ಚಲೋ ಪ್ರತಿಭಟನೆ ಆರಂಭಿಸಿದ್ದರು.

ಫೆ.21ರಂದು ಖನೌರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವೇಳೆ ರೈತರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಏರ್ಪಟ್ಟಿದ್ದು, ಯುವ ರೈತ ಶಂಭುಕರಣ್‌ ಮೃತಪಟ್ಟಿದ್ದನು. ಇದರಿಂತ ತಾತ್ಕಲಿಕವಾಗಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ರೈಲು ತಡೆ ನಡೆಸುವುದರ ಮೂಲಕ ಪ್ರತಿಭಟನೆಗೆ ಮತ್ತೆ ಚಾಲನೆ ದೊರಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.