ADVERTISEMENT

ಸಾಮಾನ್ಯ ಬೋಗಿಯಲ್ಲಿ ಸಂಚರಿಸಿ: ಸಚಿವ ಅಂಗಡಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 18:51 IST
Last Updated 18 ಜೂನ್ 2019, 18:51 IST
ಸುರೇಶ ಅಂಗಡಿ
ಸುರೇಶ ಅಂಗಡಿ   

ನವದೆಹಲಿ: ‘ಸಾಮಾನ್ಯ ಬೋಗಿ ಸೇರಿದಂತೆ ಎಲ್ಲಾ ಶ್ರೇಣಿಯ ಕೋಚ್‌ಗಳಲ್ಲಿ ಸಂಚರಿಸಿ. ಸ್ವಚ್ಛತೆ, ಶುಚಿತ್ವ ಹಾಗೂ ಇತರ ಸೇವೆಗಳ ಗುಣಮಟ್ಟ ಸುಧಾರಿಸಲು ಅನುಕೂಲವಾಗಲಿದೆ’ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ರೈಲ್ವೆ ಸಚಿವ ಪೀಯೂಷ್ ಗೋಯಲ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ರೈಲ್ವೆ ವಲಯಗಳ ಪ್ರಧಾನ ವ್ಯವಸ್ಥಾಪಕರ ಸಭೆಯಲ್ಲಿ ಅವರು ಮಾತನಾಡಿದರು.

‘ಕರ್ತವ್ಯದ ಮೇಲೆ ಪ್ರಯಾಣಿಸುವ ಸಂದರ್ಭದಲ್ಲಿ ಕನಿಷ್ಠ 30 ಬಾರಿ ಸಾಮಾನ್ಯ ಬೋಗಿಗಳಲ್ಲಿ ಸಂಚರಿಸಿ. ಎಲ್ಲ ಬೋಗಿಗಳನ್ನು ವೆಸ್ಟಿಬುಲ್‌ಗಳಿಂದ ಸಂಪರ್ಕಿಸಲಾಗಿರುತ್ತದೆ. ಹೀಗಾಗಿ ನೀವು ಎಲ್ಲ ಶ್ರೇಣಿಯ ಬೋಗಿಗಳಲ್ಲಿಯೂ ಸಂಚರಿಸಬಹುದು. ಇದರಿಂದ ರೈಲ್ವೆ ಒದಗಿಸುವ ಸೇವೆಗಳ ಬಗ್ಗೆ ಪ್ರಯಾಣಿಕರ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವುದು’ ಎಂದೂ ಹೇಳಿದರು.

ADVERTISEMENT

‘ಶೌಚಾಲಯಗಳು ಸ್ವಚ್ವವಾಗಿವೆಯೇ ಪರಿಶೀಲಿಸಿ. ಈ ಬಗ್ಗೆ ಜನರ ಪ್ರತಿಕ್ರಿಯೆ ಸಹಿತ ವರದಿ ಸಲ್ಲಿಸಿದರೆ, ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಅನುಕೂಲವಾಗುವುದು. ಸುರಕ್ಷತೆ ಬಗ್ಗೆಯೂ ಗಮನ ನೀಡುವುದು ಮುಖ್ಯ’ ಎಂದು ಸಚಿವ ಅಂಗಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.