ADVERTISEMENT

20000 ರೈಲ್ವೆ ಬೋಗಿ ನವೀಕರಿಸಿ ಐಸೋಲೇಷನ್, ಕ್ವಾರಂಟೈನ್ ಹಾಸಿಗೆ ಮಾಡಲು ಸಿದ್ದತೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 11:52 IST
Last Updated 1 ಏಪ್ರಿಲ್ 2020, 11:52 IST
ಲವ್ ಅಗರವಾಲ್
ಲವ್ ಅಗರವಾಲ್   

ನವದೆಹಲಿ:ತಬ್ಲಿಗಿ ಜಮಾತ್‌‌ನಲ್ಲಿ ಭಾಗವಹಿಸಿದ್ದ 1800 ಮಂದಿಯನ್ನು 9 ಆಸ್ಪತ್ರೆ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ದಾಖಲಿಸಲಾಗಿದೆ. ಇತ್ತೀಚೆಗೆ ಕೋವಿಡ್ -19 ರೋಗ ಪ್ರಕರಣ ಸಂಖ್ಯೆಯಲ್ಲಾದ ವರ್ಧನೆ ದೇಶದ ಪ್ರಕರಣಗಳನ್ನು ಪ್ರತಿನಿಧಿಕರಿಸುವುದಿಲ್ಲ ಎಂದು ಕೇಂದ್ರಆರೋಗ್ಯಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಹೇಳಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಗರವಾಲ್,20000 ರೈಲ್ವೆ ಬೋಗಿಗಳನ್ನು ನವೀಕರಿಸುವ ಮೂಲಕ 3.2 ಲಕ್ಷ ಐಸೋಲೇಷನ್ ಮತ್ತು ಕ್ವಾರಂಟೈನ್ ಹಾಸಿಗೆಗಳನ್ನು ಒದಗಿಸಲು ರೈಲ್ವೆ ಸಿದ್ಧತೆ ನಡೆಸುತ್ತಿದೆ.5000 ಬೋಗಿಗಳ ನವೀಕರಣ ಕಾರ್ಯ ನಡೆದು ಬರುತ್ತಿದೆ.ಟೆಸ್ಟಿಂಗ್ ಕಿಟ್, ಔಷಧಿ, ಮಾಸ್ಕ್‌ಗಳ ಸಾಗಾಟಕ್ಕಾಗಿ ವಿಮಾನಗಳು ಸಂಚರಿಸಲು ಆರಂಭಿಸಿವೆ.

ಇಲ್ಲಿಯವರೆಗೆ 1637 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. 386 ಹೊಸ ಪ್ರಕರಣಗಳು ಇದರಲ್ಲಿ ಸೇರಿವೆ. 38 ಮಂದಿ ಪ್ರಾಣ ಕಳೆದುಕೊಂಡಿದ್ದು. 132 ಮಂದಿ ಗುಣಮುಖರಾಗಿದ್ದಾರೆ . ನಿನ್ನೆಯಿಂದ ಸೋಂಕು ದೃಢಪಟ್ಟಿರುವ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ. ತಬ್ಲಿಗಿ ಜಮಾತ್ ಸದಸ್ಯರು ಪ್ರಯಾಣ ಕೈಗೊಂಡಿದ್ದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

ADVERTISEMENT

ತಪ್ಪಾದ ಮಾಹಿತಿಗಳನ್ನು ಪರೀಕ್ಷಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.ಅದಕ್ಕಾಗಿ ನಾವು technicalquery.covid19@gov.in ಎಂಬ ಇಮೇಲ್ ಐಡಿ ಕ್ರಿಯೇಟ್ ಮಾಡಿದ್ದೇವೆ. ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳು ಮತ್ತು ಏಮ್ಸ್‌ ವಿಶೇಷ ತಜ್ಞರು ಈ ಇಮೇಲ್‌ಗಳಿಗೆ ತಾಂತ್ರಿಕ ಬೆಂಬಲ ನೀಡಲಿದ್ದಾರೆ ಎಂದು ಲವ್ ಅಗರವಾಲ್ ಹೇಳಿದ್ದಾರೆ.

ರಾಜ್ಯಗಳು ವಲಸೆ ಕಾರ್ಮಿಕರಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸುತ್ತಿವೆ. 21, 486 ನಿರಾಶ್ರಿತ ಶಿಬಿರಗಳಲ್ಲಿ 6,75,133 ಜನರಿಗೆ ಆಶ್ರಯ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಾಲಿನಾ ಶ್ರೀವಾಸ್ತವ ಹೇಳಿದ್ದಾರೆ.

ನಾವು ಇಲ್ಲಿಯವರೆಗೆ 47,951 ಪರೀಕ್ಷೆಗಳನ್ನು ನಡೆಸಿದ್ದೇವೆ. ಐಸಿಎಂಆರ್ ನೆಟ್‌ವರ್ಕ್‌ನಲ್ಲಿ 126 ಲ್ಯಾಬ್‌ಗಳಿವೆ.ಅನುಮತಿ ಪಡೆದ 51 ಖಾಸಗಿ ಲ್ಯಾಬ್‌ಗಳಿವೆ ಎಂದು ಐಸಿಎಂಆರ್‌ನ ಆರ್. ಗಂಗಾ ಕೇಟ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.