ADVERTISEMENT

ರಾಜಸ್ಥಾನದಲ್ಲಿ ಅತ್ಯಾಚಾರ ನಡೆದಿಲ್ಲ: ಅಶೋಕ್‌ ಗೆಹ್ಲೋಟ್‌

ಪಿಟಿಐ
Published 1 ಅಕ್ಟೋಬರ್ 2020, 10:37 IST
Last Updated 1 ಅಕ್ಟೋಬರ್ 2020, 10:37 IST
ಅಶೋಕ್‌ ಗೆಹ್ಲೋಟ್‌
ಅಶೋಕ್‌ ಗೆಹ್ಲೋಟ್‌   

ಜೈಪುರ: ರಾಜಸ್ಥಾನದ ಬಾರಾನ್‌‌ ಜಿಲ್ಲೆಯಲ್ಲಿ ನಡೆದ ಘಟನೆಗೂ ಉತ್ತರಪ್ರದೇಶದ ಹತ್ರಾಸ್‌ನ ಸಾಮೂಹಿಕ ಅತ್ಯಾಚಾರಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ. ಈ ರೀತಿಯ ಹೋಲಿಕೆ ಜನರನ್ನು ತಪ್ಪು ದಾರಿಗೆ ಎಳೆಯುತ್ತದೆ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

ಬಾರಾನ್‌ ಜಿಲ್ಲೆಯಿಂದ ಸೆಪ್ಟೆಂಬರ್‌ 19ರಂದು ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದರು. ಇವರು ಸೋದರಿಯರು. ಸೆಪ್ಟೆಂಬರ್‌ 22ರಂದು ಈ ಸೋದರಿಯರನ್ನು ಕೋಟಾದಲ್ಲಿ ಪತ್ತೆ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿಯರ ಹೇಳಿಕೆಗಳನ್ನು ಪಡೆದು ಅವರನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಅತ್ಯಾಚಾರ ನಡೆದಿರುವುದು ವೈದ್ಯಕೀಯ ವರದಿಗಳ ಪ್ರಕಾರ ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿರುವುದಾಗಿ ಗೆಹ್ಲೋಟ್‌ ಹೇಳಿದ್ದಾರೆ.

ADVERTISEMENT

‘ಹತ್ರಾಸ್‌ ಪ್ರಕರಣ ಖಂಡನೀಯ. ಆದರೆ ಬಾರನ್‌ ಜಿಲ್ಲೆಯ ಘಟನೆಯನ್ನು ವಿರೋಧ ಪಕ್ಷ ಮತ್ತು ಮಾಧ್ಯಮದ ಹಲವರು ಹತ್ರಾಸ್‌ ಪ್ರಕರಣಕ್ಕೆ ಹೋಲಿಸುತ್ತಿದ್ದಾರೆ. ಇದು ದುರದೃಷ್ಟಕರ‘ ಎಂದು ಪ್ರತಿಕ್ರಿಯಿಸಿದ್ದಾರೆ.

‘ಹುಡುಗರ ಜತೆ ತಾವೇ ಹೋಗಿದ್ದಾಗಿ ಬಾರನ್‌ನ ಬಾಲಕಿಯರು ಮ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆ ನೀಡಿದ್ದಾರೆ’ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ಹುಡುಗರೂ ಅಪ್ರಾಪ್ತ ವಯಸ್ಸಿನವರು. ಬಾಲಕಿಯರ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ತನಿಖೆ ಮುಂದುವರಿದಿದೆ‘ ಎಂದು ಹೇಳಿದ್ದಾರೆ.

ಈ ಮಧ್ಯೆ ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂದು ಬಿಜೆಪಿ ವಕ್ತಾರ ರಾಮ್‌ಲಾಲ್‌ ಶರ್ಮ ಅವರು ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.