ಜೈಪುರ: ನಗರದಲ್ಲಿರುವ ಆಶ್ರಮವೊಂದರಲ್ಲಿರುವ ಸ್ವಯಂ ಘೋಷಿತ ದೇವಮಾನವ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ಮಹಿಳೆಯರು ಗುರುವಾರ ಆರೋಪಿಸಿದ್ದಾರೆ.
‘ತಪಸ್ವಿ ಆಶ್ರಮದ ಶೈಲೇಂದ್ರ ಮೆಹ್ತಾ ಎಂಬ ವ್ಯಕ್ತಿ ವಿರುದ್ಧ ನಾಲ್ವರು ಮಹಿಳೆಯರು ದೂರು ನೀಡಿದ್ದಾರೆ’ ಎಂದು ಭಂಕರೋಟಾ ಪೊಲೀಸ್ ಠಾಣೆ ಅಧಿಕಾರಿ ಮುಕೇಶ್ ಚೌಧರಿ ತಿಳಿಸಿದ್ದಾರೆ.
‘ಆಶ್ರಮದಲ್ಲಿ ಸತ್ಸಂಗ ಹಾಗೂ ಇತರ ಕಾರ್ಯಕ್ರಮಗಳು ನಡೆಯುತ್ತವೆ. ಇವುಗಳಲ್ಲಿ ಭಾಗಿಯಾಗಲು ಹಲವು ವರ್ಷಗಳಿಂದ ನಾವು ಆಶ್ರಮಕ್ಕೆ ಭೇಟಿ ನೀಡುತ್ತಿದ್ದೆವು. ಸೇವಾ ದೃಷ್ಟಿಯಿಂದ ಕೆಲವು ದಿನ ಕಾಲ ಆಶ್ರಮದಲ್ಲಿ ತಂಗುತ್ತಿದ್ದೆವು. ಈ ರೀತಿ ತಂಗಿದ್ದ ವೇಳೆಯಲ್ಲಿ ಮೆಹ್ತಾ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಚೌಧರಿ ಹೇಳಿದ್ದಾರೆ.
ಸಂತ್ರಸ್ತೆಯೊಬ್ಬರು ತಮ್ಮ ಮಗಳನ್ನು ಆಶ್ರಮಕ್ಕೆ ಕರೆದುಕೊಂಡು ಹೋಗದಂತೆ ಪತಿಗೆ ತಡೆದಾಗ ಈ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ತನಿಖೆ ನಡೆಯುತ್ತಿದ್ದು, ಈ ವರೆಗೆ ಆರೋಪಿಯನ್ನು ಬಂಧಿಸಿಲ್ಲ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.