
ವಂಚನೆ
ರಾಜ್ಕೋಟ್: ₹ 1,500 ಕೋಟಿ ಮೊತ್ತದ ಸೈಬರ್ ವಂಚನೆ ಜಾಲಕ್ಕೆ ಸಂಬಂಧಿಸಿದಂತೆ ಗುಜರಾತ್ನ ರಾಜ್ಕೋಟ್ ಜಿಲ್ಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿದೆ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ತೆಲಂಗಾಣದ ಅದಿಲುದ್ದೀನ್ ಮೊಹಮ್ಮದ್, ರಾಜ್ಕೋಟ್ನ ಮಿಹಿರ್ ರಂಗಾನಿ ಮತ್ತು ಹಿರೇನ್ ಲಿಂಬಾಸಿಯಾ ಬಂಧಿತರು. ಆರೋಪಿ ಅದಿಲುದ್ದೀನ್ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸುವ ಮತ್ತು ಆ ಹಣವನ್ನು‘ಅಂಗಾಡಿಯಾ’ ( ಗುಜರಾತ್ ಮತ್ತು ಮುಂಬೈ ನಡುವೆ ನಡೆಯುವ ಸಾಂಪ್ರದಾಯಿಕ ಕೊರಿಯರ್ ವ್ಯವಸ್ಥೆ) ಮೂಲಕ ವಾಪಸ್ ಪಡೆದುಕೊಳ್ಳುತ್ತಿದ್ದ. ಈತನನ್ನು ಬುಧವಾರ ಬಂಧಿಸಲಾಗಿದೆ’ ಎಂದು ಎಸ್ಪಿ ವಿಜಯ್ ಗುರ್ಜಾರ್ ತಿಳಿಸಿದ್ದಾರೆ.
‘ಇತರೆ ಇಬ್ಬರು ಬ್ಯಾಂಕ್ ಖಾತೆಗಳನ್ನು ಒದಗಿಸುವ, ಹಣ ತೆಗೆಸಿಕೊಡುವ ಮತ್ತು ಹಣ ವರ್ಗಾಯಿಸಲು ಸಹಕರಿಸುತ್ತಿದ್ದರು. ಫೆಬ್ರುವರಿ 13ರಂದು 6 ಮಂದಿಯನ್ನು ಬಂಧಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ.
‘ಜಿಎಸ್ಟಿ ಮತ್ತು ಟಿಡಿಎಸ್ನಿಂದ ತಪ್ಪಿಸಿಕೊಳ್ಳಲು ಇವರು ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ) ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದರು. ಖಾಸಗಿ ಬ್ಯಾಂಕ್ಗಳಲ್ಲಿ ಎಪಿಎಂಸಿಯ ಮೂಲಕ 15 ಖಾತೆಗಳನ್ನು ತೆರೆಸಿದ್ದರು.’
ಸೈಬರ್ ವಂಚನೆ, ಆನ್ಲೈನ್ ಗೇಮಿಂಗ್ ವಹಿವಾಟು ಮತ್ತು ಜಿಎಸ್ಟಿ ಸಂಬಂಧಿತ ಹಣದಿಂದ ಆದಾಯ ಗಳಿಸಲು ಈ ಖಾತೆ ಬಳಕೆ ಆಗಿದ್ದವು. ಈ ಖಾತೆಗಳಲ್ಲಿ ಸುಮಾರು ₹1,500 ಕೋಟಿ ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿತ್ತು. ಸೈಬರ್ ಅಪರಾಧ ಪ್ರಕರಣದಡಿ 180 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ.’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.